ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರೂರಿನಲ್ಲಿ ಉಂಟಾದ ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್‌ ಅವರ ಲಾರಿ ಇಂದು ಪತ್ತೆಯಾಗಿದೆ.

ಶಿರೂರು ಗುಡ್ಡ ಕುಸಿತ ಸಂಭವಿಸಿ ಎರಡು ತಿಂಗಳು ಕಳೆದಿದೆ. ದುರ್ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದರೂ ಇಲ್ಲಿಯವರೆಗೆ ಮೂವರ ಶವ ಪತ್ತೆಯಾಗಿಲ್ಲ. ನಾಪತ್ತೆಯಾಗಿರುವ ಜಗನ್ನಾಥ್‌ ನಾಯ್ಕ, ಲೋಕೇಶ್‌ ನಾಯ್ಕ ಹಾಗೂ ಕೇರಳದ ಅರ್ಜುನ್‌ ಮತ್ತು ಅವರ ಬೆಂಜ್‌ ಲಾರಿಯ ಪತ್ತೆಗಾಗಿ ಮತ್ತೆ ಶುಕ್ರವಾರದಿಂದ ಮೂರನೇ ಬಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.

ಇಂದು ಮುಳುಗು ತಜ್ಞ ಈಶ್ವರ್‌ ಮಲ್ಪೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಲಾರಿಯ ಚಕ್ರ ಕಂಡುಬಂದಿದೆ. ಲಾರಿ ತಲೆ ಕೆಳಗಾದ ಸ್ಥಿತಿಯಲ್ಲಿ ಕಂಡುಬಂದಿದೆ. ನೀರಿನಲ್ಲಿ ಮುಳುಗಿರುವ ಲಾರಿಯ ಚಕ್ರಕ್ಕೆ ಈಶ್ವರ್‌ ಮಲ್ಪೆ ಅವರು ಹಗ್ಗ ಕಟ್ಟಿ ಬಂದಿದ್ದಾರೆ.