ಉಡುಪಿ: ಸಾಸ್ತಾನದಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದಿಂದ ಶ್ರೀನಿವಾಸ ಪದ್ಮಾವತಿ ಒಳಗೊಂಡ ಮೂರ್ತಿಯನ್ನು ಮೆರವಣಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಸ್ತಾನದ ಶ್ರೀನಿವಾಸ ಕಲ್ಯಾಣ ನಡೆಯುವ ಸ್ಥಳಕ್ಕೆ ಕರೆ ತರಲಾಯಿತು.
ಸಾಲಿಗ್ರಾಮದಿಂದ ಹೊರಟ ಪುರ ಮೆರವಣಿಗೆಯಲ್ಲಿ 10ಕ್ಕೂ ಅಧಿಕ ಕುಣಿತ ಭಜನಾ ತಂಡಗಳು, ಕೀಲು ಕುದುರೆ, ಕೋಲಾಟ ಭಜನೆ, ಚೆಂಡೆ ವಾದನ, ಪಂಢರಾಪುರ ಹೋಲುವ ಭಜನಾ ತಂಡ, ಪೂರ್ಣಕುಂಭ ಕಲಶ ಹಿಡಿದ ಭಕ್ತರು ಮೆರವಣಿಗೆಗೆ ಮೆರುಗು ತುಂಬಿದರು.
ಗೋದೂಳಿ ಮುಹೂರ್ತದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ತಿರುಪತಿ ಪದ್ಮಾವತಿ ಶ್ರೀನಿವಾಸ ಕಲ್ಯಾಣೋತ್ಸವದ ಉಸ್ತುವಾರಿಯನ್ನು ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ವಹಿಸಿತ್ತು.
ಕೋಟದ ಉದ್ಯಮಿ ಆನಂದ ಸಿ ಕುಂದರ್, ಪಾಂಡೇಶ್ವರದ ವಿದ್ವಾನ್ ವಿಜಯ ಮಂಜರ್, ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ದಂಪತಿ, ಸಮಿತಿ ಪದಾಧಿಕಾರಿಗಳಾದ ಎಂ.ಸಿ ಚಂದ್ರಶೇಖರ, ಪ್ರತಾಪ ಶೆಟ್ಟಿ, ಸುರೇಶ ಪೂಜಾರಿ ಮತ್ತಿತರರು ಭಾಗಿಯಾದರು.

