ಉಡುಪಿ: ದೇಶದ ಪ್ರಸಿದ್ಧ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಅವರು ಹರಕೆ ರೂಪದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಸುಮಾರು 4 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸಿದರು. ಶ್ರೀದೇವಿ ಸನ್ನಿಧಿಗೆ ವಜ್ರ ಖಚಿತ ಕಿರೀಟವನ್ನು ಓಲಗ ಮಂಟಪದಿಂದ ಪುರಮೆರವಣಿಗೆ ಯಲ್ಲಿ ಬರಮಾಡಿಕೊಳ್ಳಲಾಯಿತು.

ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತನಾಗಿರುವ ಇಳಯರಾಜ ಅವರು, ಈ ಹಿಂದೆಯೂ ಮೂಕಾಂಬಿಕೆಗೆ ಬಗೆ ಬಗೆಯ ಆಭರಣ ತೊಡಿಸಿ ಖುಷಿಪಟ್ಟಿದ್ದರು. ವಜ್ರದ ಕಿರೀಟ ಸಹಿತ ಆಭರಣಗಳ ಜೊತೆಗೆ ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಣೆ ಮಾಡಿದರು. ಆಭರಣ ಜರ್ಪಿಸುವ ಮುನ್ನ ಆಕರ್ಷಕ ಮೆರವಣಿಗೆ ನಡೆಯಿತು.

ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರು ಮೆರವಣಿಗೆಯಲ್ಲಿ ಭಾಗಿಯಾದರು. ಕೋಟ್ಯಂತರ ಮೌಲ್ಯದ ಆಭರಣ ಅರ್ಪಿಸಿ ಇಳಯರಾಜ ಭಾವುಕರಾದರು. ಮೂಕಾಂಬಿಕೆಯಿಂದಾಗಿ ತನ್ನ ಜೀವನದಲ್ಲಿ ಪವಾಡ ನಡೆದಿದೆ ಎಂದು ಇಳಯರಾಜ ನಂಬುತ್ತಾರೆ.

ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ತಮ್ಮ ಹುಟ್ಟುಹಬ್ಬವನ್ನು ಇಲ್ಲೇ ಆಚರಣೆ ಮಾಡುತ್ತಾರೆ. ಮಾತ್ರವಲ್ಲ ಸಂಗೀತ ಸೇವೆಯನ್ನೂ ನೀಡುತ್ತಾ ಬಂದಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಭಕ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇಗುಲದ ವ್ಯವಸ್ಥಾಪನಾ ಸಮಿತಿ ವತಿಯಿಂದ ಮಹಾದಾನಿಗೆ ಗೌರವಾರ್ಪಣೆ ಮಾಡಲಾಯಿತು.