ಉಡುಪಿ: ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಪದಗ್ರಹಣ ಮಾಡಿದ್ದು, ಈ ಸಂದರ್ಭದಲ್ಲಿ ಭಾಗಿಯಾದ ಉಡುಪಿಯ ಪೇಜಾವರ ಶ್ರೀಗಳು ಸಂತಸ ಹಂಚಿಕೊಂಡಿದ್ದಾರೆ. ದೇಶದ ನಾಗರಿಕನಾಗಿ ಪದಗ್ರಹಣದಲ್ಲಿ ಸಂತೋಷದಿಂದ ಭಾಗವಹಿಸಿದ್ದೇವೆ. ನೂತನ ಸಂಪುಟ ಶ್ರದ್ಧೆಯಿಂದ ಕಾರ್ಯನಿರ್ವಹಿಸಲಿ ಎಂದು ಹೇಳಿದ್ದಾರೆ.

ಸಮಾಜದ ಎಲ್ಲರಿಗೂ ಹಿತವಾಗುವಂತೆ ಕೇಂದ್ರ ಸರಕಾರ ಕಾರ್ಯನಿರ್ವಹಿಸಲಿ. ಮುಂದಿನ ಐದು ವರ್ಷದ ಆಡಳಿತವನ್ನು ಸುಸೂತ್ರವಾಗಿ ಪರಿಪೂರ್ಣಗೊಳಿಸಲಿ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾರೈಸಿದ್ದಾರೆ.

ಮೂರನೇ ಅವಧಿಯ ನರೇಂದ್ರ ಮೋದಿ ಸರ್ಕಾರದಲ್ಲಿ ಈ ಬಾರಿ ಕರ್ನಾಟಕದಿಂದ ಐವರಿಗೆ ಸಚಿವಗಿರಿ ಭಾಗ್ಯ ದೊರೆತಿದೆ. ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಪ್ರಹ್ಲಾದ್‌ ಜೋಶಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.