ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಆಯೋಜಿಸಿರುವ ಮಹಾರುದ್ರಯಾಗದ ಅಂಗವಾಗಿ ಕೊಡವೂರಿನ ಪ್ರಮುಖ ಬೀದಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಕೊಡವೂರು ದೇವಸ್ಥಾನ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಅಳವಡಿಸಿರುವ ಆಕರ್ಷಕ ದೀಪಾಲಂಕಾರ ಭಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಕೊಡವೂರಿನಿಂದ ಆದಿಉಡುಪಿವರೆಗೆ ರಸ್ತೆಯುದ್ದಕ್ಕೂ ವಿವಿಧ ವಿನ್ಯಾಸದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಇಡೀ ಪ್ರದೇಶ ಉತ್ಸವದ ಮೆರಗು ಪಡೆದುಕೊಂಡಿದೆ. ವಿಶೇಷವಾಗಿ ಆಶೀರ್ವಾದ ಜಂಕ್ಷನ್ ಹಾಗೂ ಮಲ್ಪೆ ಸಿಟಿಸಜನ್ ಸರ್ಕಲ್ನಿಂದ ದೇವಸ್ಥಾನದವರೆಗೆ ಮಾಡಲಾಗಿರುವ ಬಣ್ಣ ಬಣ್ಣದ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ. ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಮಹಾರುದ್ರಯಾಗದ ಹಿನ್ನೆಲೆ ಪ್ರತಿದಿನ ಸಾವಿರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೊಡವೂರು ಪ್ರದೇಶ ಭಕ್ತಿಭಾವ ಹಾಗೂ ಉತ್ಸವದ ವಾತಾವರಣದಿಂದ ಕೂಡಿದೆ.

