ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಡಿ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಮೊದಲ ಬಾರಿ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮಲ್ಪೆಯಲ್ಲಿ ಆರೇಳು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ.

ನಾನು ಸ್ವಲ್ಪ ಮೀನು ತೆಗೆದಿದ್ದೆ. ಅದಕ್ಕೆ ಅವರು ಮೀನು ಕದ್ದಿದ್ದು ಎಂದು ಹೇಳಿ ಹೊಡೆದರು‌. ಈ ಘಟನೆಯಾದ ಮೇಲೆ ನಾನು ಬಂದರಿಗೆ ಹೋಗಿಲ್ಲ. ಇನ್ನು ಇಲ್ಲಿ ಕೆಲಸ ಮಾಡೋದು ಕಷ್ಟ, ಹೀಗಾಗಿ ನಾನು ಊರಿಗೆ ಹೋಗುತ್ತೇನೆ ಎಂದರು.

ಸ್ವಲ್ಪ ಮೀನು ತೆಗೆದದ್ದು ಹೌದು. ಬಂದರಿನಲ್ಲಿ ಆ ಥರ ಮೀನು ತೆಗೆಯೋದು ಸಹಜ. ಆವತ್ತು ಏನೋ ನನ್ನ ಗ್ರಹಚಾರ ಸರಿ ಇರಲಿಲ್ಲ. ಅದಕ್ಕೆ ಏನು ಮಾಡೋಕೆ ಆಗಲ್ಲ. ಈಗ ಇಲ್ಲಿ ಇರೋಕೆ ಒಂಥರ ಆಗುತ್ತೆ. ಬೇರೆ ನನಗೆ ಯಾರು ತೊಂದರೆ ಕೊಟ್ಟಿಲ್ಲ. ನನಗೆ ಅವರ ಮೇಲೆ ಏನು ದ್ವೇಷ ಇಲ್ಲ. ಅವರಿಗೆ ನನ್ನ ಮೇಲೆ ದ್ವೇಷ ಇಲ್ಲ ಎಂದು ಹೇಳಿದರು.

ಅವರನ್ನು ಬಂದರಿನಲ್ಲಿ ನಾನು ನೋಡಿ ಪರಿಚಯ ಇದೆ. ಯಾರಿಗೆ ಏನು ಮಾಡೋದು ಬೇಡ. ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಇರುತ್ತೇವೆ. ಮೊನ್ನೆಯ ಘಟನೆ ಬಗ್ಗೆ ನನಗೆ ಏನೂ ಹೇಳಲು ಇಲ್ಲ. ಅವರು ಮೇಲಿಂದಲೇ ಕಂಪ್ಲೇಂಟ್ ಕೊಡಲು ಹೇಳಿದರು. ಕಂಪ್ಲೇಂಟ್ ಕೊಡಲು ಬನ್ನಿ ಎಂದು ಕರೆದುಕೊಂಡು ಹೋದರು. ಅವರು ಹೇಳಿದ್ದಕ್ಕೆ ನಾನು ಸಹಿ ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದರು.

ಘಟನೆ ಆದ ದಿನ ರಾತ್ರಿ ರಾಜಿ ಮಾಡಿಕೊಂಡಿದ್ದೆವು. ಕೇಸ್ ಬೇಡ ಎಂದು ಮಾತನಾಡಿ ಬಂದಿದ್ದೆವು. ಆಮೇಲೆ ಮೇಲಿಂದ ಇದು ಆಯ್ತು ಎಂದು ಹೇಳಿದರು. ಯಾರಿಗೂ ಶಿಕ್ಷೆ ಆಗೋದು ಬೇಡ ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ದುಡಿದು ತಿನ್ನುತ್ತೇವೆ ಎಂದರು.