ಉಡುಪಿ: ವಿಶ್ವ ಪೋಲಿಯೋ ದಿನಾಚರಣೆ ಪ್ರಯುಕ್ತ ರೋಟರಿ ಉಡುಪಿ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ರೋಟರ್ಯಾಕ್ಟ್ ಕ್ಲಬ್ ಉಡುಪಿ ಮತ್ತು ಮಣಿಪಾಲ ಕೆಎಂಸಿ ವತಿಯಿಂದ ವಾಕಥಾನ್ ಕಾರ್ಯಕ್ರಮ ಮಾಹೆಯ ಇಂಟರ್ಯಾಕ್ಟ್ ಹಾಲ್ನಲ್ಲಿ ನಡೆಯಿತು.
ಮಾಹೆಯ ಸಹಕುಲಪತಿ ಡಾ. ಶರತ್ ರಾವ್ ಮಾತನಾಡಿ, ಸರಕಾರೇತರ ಸಂಸ್ಥೆಯಾಗಿ ರೋಟರಿಯ ಕಾರ್ಯವೈಖರಿ ಶ್ಲಾಘನಾರ್ಹವಾದುದು. ಮಕ್ಕಳ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಲಸಿಕೆಗಳನ್ನು ತೆಗೆದುಕೊಳ್ಳುವುದು ಅತೀ ಅಗತ್ಯ. ಇಂತಹ ವಾಕಥಾನ್ಗಳನ್ನು ಆಯೋಜಿಸುವ ಮೂಲಕ ಜನರು ಮತ್ತಷ್ಟು ಜಾಗೃತಗೊಳ್ಳಲು ಸಾಧ್ಯವಿದೆ ಎಂದರು.
ಜಿ.ಪಂ.ಸಿಇಓ ಪ್ರತೀಕ್ ಬಾಯಲ್ ಮಾತನಾಡಿ, ಪೋಲಿಯೋ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ಜನಾಂಗ ಕೂಡ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುವುದು ಅತೀ ಅಗತ್ಯ ಎಂದರು.
ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಮಾತನಾಡಿದರು. ಪೋಲಿಯೋ ಪ್ಲಸ್ನ ಜಿಲ್ಲಾ ಚೇರ್ಮನ್ ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್., ವಲಯ 4ರ ಅಸಿಸ್ಟೆಂಟ್ ಗವರ್ನರ್ ಅಮಿತ್ ಅರವಿಂದ್, ರೋಟರಿ ಪಬ್ಲಿಕ್ ಇಮೇಜ್ನ ವೈಸ್ ಚೇರ್ಮನ್ ರೇಖಾ ಉಪಾಧ್ಯಾಯ, ಪೋಲಿಯೋ ಪ್ಲಸ್ ವಲಯ 4ರ ಝೋನಲ್ ಕೋ-ಆರ್ವಿನೇಟರ್ಗಳಾದ ಡಾ। ಪ್ರಭಾಕರ ರೆಂಜಲ್, ಉಮೇಶ್ ಸಾಲ್ಯಾನ್, ಅಧ್ಯಕ್ಷ ವೈ.ಸೂರಜ್ ಕುಮಾರ್, ಉಡುಪಿ ರೋಟರಿ ಕ್ಲಬ್ ಅಧ್ಯಕ್ಷ ಅರ್ಜುನ್, ಕೆಎಂಸಿ ರೋಟರ್ಯಾಕ್ಟ್ ಅಧ್ಯಕ್ಷ ವ್ರಿಶನ್ ಶೆಟ್ಟಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಉಡುಪಿ ಟೌನ್ ಅಧ್ಯಕ್ಷ ದೀಪಕ್ ರಾಮ್ ಬಾಯರಿ ಸ್ವಾಗತಿಸಿ, ಶ್ರೀಧರ್ ನಿರೂಪಿಸಿದರು.

