ಉಡುಪಿ: ಮಂಚಿ ಕುಮೇರಿಯ ವಾಗ್ಲೆ ಸ್ಟೋರ್ಗೆ ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್ ತಂತಿಗಳು ಜೋತುಬಿದ್ದಿರುವುದರಿಂದ ಸಾರ್ವಜನಿಕರು ಆತಂಕದ ನಡುವೆ ಸಂಚರಿಸುವಂತಾಗಿದೆ.
ರಸ್ತೆಯಲ್ಲಿ ಸಂಚರಿಸುವ ದೊಡ್ಡ ವಾಹನಗಳಿಗೆ ವಿದ್ಯುತ್ ತಂತಿಗಳು ಸ್ಪರ್ಶಿಸುತ್ತಿದ್ದು, ಅಪಾಯದ ಭೀತಿ ಎದುರಾಗಿದೆ. ಅಲ್ಲದೆ, ಪಾದಚಾರಿಗಳೂ ಭಯದಿಂದಲೇ ಈ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ವಿದ್ಯುತ್ ತಂತಿಗಳಿಗೆ ಮರಗಳ ಕೊಂಬೆಗಳು ತಾಗುತ್ತಿರುವ ಪರಿಣಾಮ ಪದೇ ಪದೇ ವಿದ್ಯುತ್ ಸಂಪರ್ಕ ಕಡಿತವಾಗುತ್ತಿದೆ. ಗಾಳಿ–ಮಳೆಯ ಸಂದರ್ಭಗಳಲ್ಲಿ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ.
ಅಪಾಯ ಸಂಭವಿಸುವ ಮುನ್ನವೇ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜೋತುಬಿದ್ದಿರುವ ವಿದ್ಯುತ್ ತಂತಿಯನ್ನು ಸರಿಪಡಿಸುವುದು ಹಾಗೂ ಮರಗಳ ಕೊಂಬೆಗಳನ್ನು ತೆರವುಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮಂಚಿ ಕುಮೇರಿಯ ಜನರು ಒತ್ತಾಯಿಸಿದ್ದಾರೆ.

