ಉಡುಪಿ : ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ಹರಿಕಥೆ ಕಲಾವಿದೆ ವಿಡಿಯೋ ಸಂದೇಶದ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಜೊತೆಗೆ, ಈ ವಿಚಾರದಲ್ಲಿ ಉಡುಪಿ ಮಠ ಅಥವಾ ಶಿರೂರು ಮಠಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಕಲಾವಿದೆ, ‘ಯಾರನ್ನೂ ನಿಂದಿಸುವ ಉದ್ದೇಶ ನಮಗಿರಲಿಲ್ಲ. ಯಾವುದೇ ಮಧ್ವ ಮಠದವರು ಈ ರೀತಿಯ ಹೇಳಿಕೆ ನೀಡುವಂತೆ ನಮಗೆ ಹೇಳಿಕೊಟ್ಟಿಲ್ಲ. ಪುಸ್ತಕವನ್ನು ಉಲ್ಲೇಖಿಸಿ ಓದಿದ್ದೇವೆ. ನಮ್ಮ ಮಾತಿನಿಂದ ಬೇರೆ ಮತದವರಿಗೆ ಅಥವಾ ಮಠದವರಿಗೆ ನೋವಾಗಿದ್ದರೆ ಹೃತ್ತೂರ್ವಕ ಕ್ಷಮೆ ಕೋರುತ್ತೇವೆ’ ಎಂದು ಹೇಳಿದ್ದಾರೆ.
ಹರಿಕಥೆ ಕಲಾವಿದೆಯ ಕ್ಷಮೆಯಾಚನೆ ವಿಡಿಯೋ ವಿಷಾದ ವ್ಯಕ್ತಪಡಿಸಿದ ಶಿರೂರು ಮಠ ಘಟನೆಗೆ ಸಂಬಂಧಿಸಿದಂತೆ ಪರ್ಯಾಯ ಶಿರೂರು ಮಠವೂ ಅಧಿಕೃತ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ಶಿರೂರು ಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಮಠದ ಸುಪರ್ದಿಯಲ್ಲಿರುವ ರಾಜಾಂಗಣದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಅಂಕಿತಾ ನಾಯಕ್ ಹಾಗೂ ಗೌರಿ ಪಾಂಡುರಂಗಿ ಅವರು ಭರತನಾಟ್ಯ ಕಾರ್ಯಕ್ರಮಕ್ಕಾಗಿ ಅನುಮತಿ ಕೋರಿದ್ದು, ಕಾರ್ಯಕ್ರಮದ ಮಧ್ಯೆ ‘ಭಕ್ತ ಪ್ರಹ್ಲಾದ’ ಹರಿಕಥೆ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.ಆ ಸಂದರ್ಭದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಕುರಿತು ಅಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಬ್ಬರಿಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿತ್ತು. ಅದರಂತೆ ಅವರು ಕ್ಷಮೆಯಾಚಿಸಿದ್ದು, ಈ ಅನಪೇಕ್ಷಿತ ಘಟನೆಯ ಬಗ್ಗೆ ಮಠ ವಿಷಾದ ವ್ಯಕ್ತಪಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನಿದು ವಿವಾದ?
ರಾಜಾಂಗಣದಲ್ಲಿ ಮಹಿಳೆಯರೀರ್ವರು ನಡೆಸಿಕೊಟ್ಟ ಹರಿಕಥೆ ಕಾರ್ಯಕ್ರಮದಲ್ಲಿ ಆಚಾರ್ಯ ಮಾಧ್ವರ ಕಥೆ ಹೇಳುವ ಸಂದರ್ಭದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರರನ್ನು ಏಕವಚನದಲ್ಲಿ ನಿಂದಿಸಲಾಗಿತ್ತು. ಶಂಕರಾಚಾರ್ಯರ ಬಗ್ಗೆ ಅವಹೇಳನಕಾರಿಯಾಗಿ ಕಟ್ಟುಕಥೆ ಹೇಳಲಾಗಿತ್ತು. ಅದು ಶಂಕರ ಅನುಯಾಯಿಗಳು ಹಾಗೂ ಹಿಂದೂ ಪರ ಹೋರಾಟಗಾರರನ್ನು ಕೆರಳಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವಿರೋಧಕ್ಕೆ ಗುರಿಯಾಗಿತ್ತು.

