ಉಡುಪಿ: ಕಾರೊಂದು ಬೈಕ್ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಅ.7 ರ ಸೋಮವಾರ ರಾತ್ರಿ 10.30ರ ಸುಮಾರಿಗೆ ಉಡುಪಿ ಎಂಜಿಎಂ ಕಾಲೇಜು ಎದುರಿನ ಡೈವರ್ಶನ್ ಪಾಯಿಂಟ್ನಲ್ಲಿ ನಡೆದಿದೆ. ಮೃತರನ್ನು ಹಿರಿಯಡ್ಕ ನಿವಾಸಿ, ತೆಂಕನಿಡಿಯೂರು ಕಾಲೇಜಿನ ಪದವಿ ವಿದ್ಯಾರ್ಥಿ ವೀರಜ್(18) ಎಂದು ಗುರುತಿಸಲಾಗಿದೆ.
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ -169ಎ ರಸ್ತೆಯ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಎಂಜಿಎಂ ಕಾಲೇಜು ಎದುರು ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಹಾದು ಹೋಗಿರುವ ಏಕಮುಖ ಸಂಚಾರ ರಸ್ತೆಯನ್ನು ಕೆಲವು ಸಮಯದಿಂದ ತಾತ್ಕಾಲಿಕವಾಗಿ ಬಂದ್ ಮಾಡಿ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಬರುವ ರಸ್ತೆಗೆ ಡೈವರ್ಟ್ ಮಾಡಲಾಗಿದೆ.
ಉಡುಪಿ ಕಡೆಯಿಂದ ಈ ಡೈವರ್ಶನ್ ನಲ್ಲಿ ತಿರುವು ಪಡೆದು ಮಣಿಪಾಲ ಕಡೆಗೆ ಹೋಗುತ್ತಿದ್ದ ಬೈಕಿಗೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ವೀರಜ್ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

