ಉಡುಪಿ: ಕೆಲವರು ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡುತ್ತಿದ್ದಾರೆ. ಅವರಿಗೆ ಒಬ್ಬರಿಗೇ ಟಿಕೆಟ್ ಕೊಡಬೇಕು ಎಂದರೆ ನಾವೆಲ್ಲಿ ಹೋಗಬೇಕು. ಅಧಿಕಾರದಿಂದ ಇಳಿದು ಸರಿಯಾಗಿ ಒಂದು ವರ್ಷ ಆಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ರಘುಪತಿ ಭಟ್ ಹಾಗೂ ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಉಡುಪಿಯಲ್ಲಿ ಇಂದು ಆಯೋಜಿಸಿದ ವಿಧಾನಪರಿಷತ್ ಘಟನಾಯಕರ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಬಿಜೆಪಿ ಶಕ್ತಿಯುತವಾಗುತ್ತಾ ಹೋಗುತ್ತಿದೆ. ಆದರೆ, ಅಧಿಕಾರದಲ್ಲಿ ಏನು ಅಯಸ್ಕಾಂತ ಇದೆಯಾ? ರಾಮಮಂದಿರ, ಹಿಂದೂ ಹಿತ, ಸ್ಥಳೀಯ ಸಮಸ್ಯೆಗೆ ನೀವು ಬಂಡಾಯ ಎದ್ದಿದ್ದೀರಾ?. ನಿಮ್ಮ ಆತ್ಮಸಾಕ್ಷಿ ಎಷ್ಟಿದೆ ಎಂದು ಎಲ್ಲರ ಮುಂದೆ ಪ್ರದರ್ಶನ ಆಗಿದೆ ಎಂದು ರಘುಪತಿ ಭಟ್ ವಿರುದ್ಧ ಗುಡುಗಿದರು.

ಸಾರ್ವಜನಿಕ ಹಿತ ಮತ್ತು ವ್ಯಕ್ತಿಗತ ಸ್ವಾರ್ಥದಿಂದ ನಿರ್ಧಾರ ತೆಗೆದುಕೊಂಡಿದ್ದೀರಿ. ಸಮಾಜಹಿತ ಮತ್ತು ಸಂಘಟನೆಯೇ ನಮ್ಮ ಧರ್ಮ. ಮೂರು ದಿನಗಳ ಒಳಗೆ ಬಿಟ್ಟು ಹೋದವರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ. ಇದು ಪವಾಡ ಪುರುಷರ ಕಾಲ ಅಲ್ಲ. ಸಂಘಟನೆಗೆ ಮಾತ್ರ ಶಕ್ತಿ, ಬಹುಮತದಿಂದ ಮಾತ್ರ ನಿರ್ಧಾರಗಳು ಸಾಧ್ಯ. ಅಧಿಕಾರದ ಆಸೆಯಿಂದ ಹೋಗುವವರ ಜೊತೆ ಗೆರೆದಾಟಿ ಹೋಗಬೇಡಿ ಎಂದರು.