ಉಡುಪಿ: ನಿಟ್ಟೆ ಗ್ರಾಮದ ರೆಸಿಡೆನ್ಸಿಯೊಂದಕ್ಕೆ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು, ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಹೋಟೆಲ್‌ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸ್‌ ಉಪನಿರೀಕ್ಷಕರ ನೇತೃತ್ವದ ತಂಡ ದಾಳಿ ನಡೆಸಿದ ವೇಳೆ ಸುಜೀತ್‌, ಅಭಿಮನ್ಯು, ಮಹೇಶ್‌, ಧೀರಜ್‌, ನರೇಶ್‌ ಕುಮಾರ್‌ ಹಾಗೂ ಪ್ರಶಾಂತ್‌ ಸೇರಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಯಶೋಧರ (ಅಣ್ಣು), ನೂರು ಮಹಮ್ಮದ್‌, ರವಿಶೆಟ್ಟಿ ಹಾಗೂ ಸತೀಶ್‌ ಎಂಬ ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ.

ದಾಳಿಯ ವೇಳೆ ಜುಗಾರಿಗೆ ಬಳಸಲಾಗಿದ್ದ ₹16,350 ನಗದು, ಇಸ್ಪೀಟು ಎಲೆಗಳು, ಏಳು ಮೊಬೈಲ್‌ ಫೋನ್‌ಗಳು ಹಾಗೂ ಕುರ್ಚಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹43,850 ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳು ಹಾಗೂ ಜುಗಾರಿ ನಡೆಸಲು ಅವಕಾಶ ಕಲ್ಪಿಸಿದ್ದ ಹೋಟೆಲ್‌ ಸನ್ಮಾನ್‌ ರೆಸಿಡೆನ್ಸಿಯ ಮಾಲೀಕರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.