ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ವ್ಯಕ್ತಿ ಕೊನೆಗೂ ಪವಾಡ ಸದೃಶರಾಗಿ ಬದುಕಿ ಬಂದ ಘಟನೆ ಆದಿ ಉಡುಪಿಯ ಕಂಬಳಕಟ್ಟೆಯಲ್ಲಿ ಸಂಭವಿಸಿದೆ.
ಕಂಬಳಕಟ್ಟೆಯ ನಿವಾಸಿ ಶ್ರೀನಿವಾಸ ಆಚಾರ್ಯ (62 ವರ್ಷ) 20 ಅಡಿ ಆಳದ ನೀರಿರುವ ಬಾವಿಗೆ ಬಿದ್ದು ಮೂರು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಗೆದ್ದುಬಂದಿದ್ದಾರೆ. ಶ್ರೀನಿವಾಸ ಒಬ್ಬಂಟಿಯಾಗಿರುವ ಆಚಾರ್ಯರಿಗೆ ಕಳೆದ ಎರಡು ತಿಂಗಳ ಹಿಂದೆ ಆರೋಗ್ಯ ಸಮಸ್ಯೆ ಕಾಡಿದ್ದು, ಬಳಿಕ ಗುಣಮುಖ ಹೊಂದಿದ್ದರು.
ತನ್ನ ಮನೆ ಮುಂದಿನ 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಗೆ ಕಸ ಬಿದ್ದು ಪಂಪ್ ಮೂಲಕ ನೀರು ಸರಿಯಾಗಿ ಬಾರದ ಕಾರಣ ಕಳೆದ ಶನಿವಾರ ಸಂಜೆ ಪಂಪ್ ಫುಟ್ ಬಾಲ್ ಪೈಪಿಗೆ ಕಟ್ಟಿದ್ದ ಹಗ್ಗವನ್ನು ಮೇಲಕ್ಕೆಳೆಯಲು ಅವರು ಪ್ರಯತ್ನಿಸಿದ್ದರು.
ಈ ವೇಳೆ ಹಗ್ಗ ತುಂಡಾದ ಕಾರಣ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಬಾವಿಯ ನೀರಿನಲ್ಲಿ ಮುಳುಗಿದರೂ ಜೀವ ಉಳಿಸಿಕೊಳ್ಳಲು ಪರದಾಡಿದ್ದ ಅವರ ಕೈಗೆ ಬಾವಿಯೊಳಗಿದ್ದ ಫುಟ್ ಬಾಲ್ ಪೈಪ್ ಹಾಗೂ ಅದಕ್ಕೆ ಕಟ್ಟಿದ್ದ ಹಗ್ಗ ಸಿಕ್ಕಿದ್ದು, ಅದನ್ನು ಹಿಡಿದುಕೊಂಡೇ ಜೀವ ರಕ್ಷಣೆಗಾಗಿ ಬೊಬ್ಬೆ ಹಾಕಿದ್ದರು. ಆದರೆ ಅವರ ಕೂಗು ಹೊರಕ್ಕೆ ಯಾರಿಗೂ ಕೇಳಿರಲಿಲ್ಲ.
ಪತ್ತೆಗೆ ಕಾರಣವಾಯ್ತು ಗ್ಯಾಸ್:
ಶ್ರೀನಿವಾಸ್ ಅವರು ಗ್ಯಾಸ್ ಬುಕ್ ಮಾಡಿದ್ದರೂ ತಡವಾಗಿದ್ದರಿಂದ ತನ್ನ ಪರಿಚಯಸ್ಥರಾದ ಗಣೇಶ್ ಎಂಬವರ ಬಳಿಯಿಂದ ಗ್ಯಾಸ್ ಸಿಲಿಂಡರ್ ಒಂದು ಪಡೆದಿದ್ದರು. ಬಳಿಕ ಗಣೇಶ್ ಅವರಿಗೆ ಗ್ಯಾಸ್ ಸಿಲಿಂಡರ್ ಅಗತ್ಯ ಬಿದ್ದಾಗ ಶ್ರೀನಿವಾಸ್ ಅವರಿಗೆ ಕರೆ ಮಾಡಿ ಗ್ಯಾಸ್ ಕೇಳಿದಾಗ ತಾನು ಬುಕ್ ಮಾಡಿದ್ದ ಗ್ಯಾಸ್ ಸಿಲಿಂಡರ್ ಬಂದಿಲ್ಲ ಬಂದ ಮೇಲೆ ನೀಡುವುದಾಗಿ ಹೇಳಿದ್ದರು.
ಮೂರ್ನಾಲ್ಕು ದಿನಗಳ ಬಳಿಕ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ಭಟ್ಟರಿಗೆ ಗ್ಯಾಸ್ ಸಿಲಿಂಡರ್ವೊಂದು ಆದಷ್ಟು ಬೇಗದಲ್ಲಿ ನೀಡುವಂತೆ ಮನವಿ ಮಾಡಿದ್ದರು. ಆಗ ಗ್ಯಾಸ್ ಸಿಬ್ಬಂದಿ ಅವರ ಮನೆಗೆ ತೆರಳಿ ಎರಡು ದಿನಗಳಾಗಿದ್ದು ಮನೆಯಲ್ಲಿ ಭಟ್ಟರು ಇರಲಿಲ್ಲ ಎಂದು ಹೇಳಿದ್ದರು. ಇದರಿಂದ ಸಂಶಯಗೊಂಡ ಗಣೇಶ್ ಅವರು ಶ್ರೀನಿವಾಸ ಅವರ ಮನೆಯಿಂದ 90ಮೀ. ದೂರದಲ್ಲಿದ್ದ ತನ್ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದವರಿಗೆ ಕರೆ ಮಾಡಿ ಶ್ರೀನಿವಾಸ ಅವರ ಮನೆಯತ್ತ ತೆರಳಿ ಪರಿಶೀಲಿಸುವಂತೆ ಹೇಳಿದ್ದರು.
ಬಾಡಿಗೆ ಮನೆಯಲ್ಲಿದ್ದವರು ಶ್ರೀನಿವಾಸ ಅವರನ್ನು ಮನೆಯ ಸುತ್ತ ಹುಡುಕಾಡಿ ಬಳಿಕ ಸಂಶಯದ ಮೇರೆಗೆ ಬಾವಿಯಲ್ಲಿ ನೋಡಿದ್ದರು. ಆಗ ಶ್ರೀನಿವಾಸ ಆಚಾರ್ಯರು ಮೂರು ದಿನಗಳಿಂದ ಬಾವಿಯೊಳಗೆ ಹಗ್ಗ ಹಾಗೂ ಫೂಟ್ ಬಾಲ್ ಪೈಪ್ ಹಿಡಿದುಕೊಂಡು ನಿತ್ರಾಣಗೊಂಡಿದ್ದು ಕಂಡುಬಂದಿತ್ತು. ಕೂಡಲೇ ಸ್ಥಳೀಯರು ಬಾವಿಗೆ ಏಣಿ ಹಾಕಿ ಅವರನ್ನು ಮೇಲಕ್ಕೆ ಬರಲು ಹೇಳಿದ್ದರು. ಆದರೆ, ಮೂರು ದಿನಗಳಿಂದ ಆಹಾರ ಸೇವಿಸದೇ ನಿತ್ರಾಣಗೊಂಡಿದ್ದ ಅವರಿಗೆ ಮೇಲಕ್ಕೆ ಬರಲಾಗದ್ದರಿಂದ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಯಿತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಲೀಡಿಂಗ್ ಫೈರ್ಫೈಟರ್ಗಳಾದ ಸತೀಶ್, ಅಶ್ವಿನ್ ಸನಿಲ್, ಚಾಲಕ ಭರತ್ ಎನ್., ಫೈರ್ಫೈಟರ್ಗಳಾದ ಗಣೇಶ್ ವೇತಾಳ್, ಮಹಾಂತೇಶ್ ಅವರು ಸ್ಥಳೀಯರ ಸಹಕಾರ ದಿಂದ ಬಾವಿಯೊಳಗೆ ಇಳಿದು ಆಚಾರ್ಯ ರನ್ನು ಮೇಲಕ್ಕೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಯಿತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ.ಅಗ್ನಿಶಾಮಕ ಸಿಬ್ಬಂದಿಗಳ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

