ಉಡುಪಿ: ನಿರಂತರ ಸುರಿದ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಕೆಲವೊಂದು ಪ್ರವಾಸಿ ತಾಣಗಳಿಗೆ ಜೀವ ಕಳೆ ಬಂದಿದೆ. ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುವ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ದಟ್ಟ ಕಾನನದ ಮಧ್ಯೆ ಅಲ್ಲಲ್ಲಿ ಸೃಷ್ಟಿಯಾಗಿರುವ ಕೃತಕ ಜಲಪಾತಗಳು, ಬೆಟ್ಟಗಳಿಗೆ ಮುತ್ತಿಕ್ಕಿ ಮರೆಯಾಗುತ್ತಿರು ಮಂಜಿನ ಮೋಡಗಳು, ಮಳೆಯ ಸಿಂಚನ ಸ್ವರ್ಗವೇ ಧರೆಗುಳಿದಂತೆ ಭಾಸವಾಗುವ ವಾತಾವರಣ, ಒಂದೊಂದು ದೃಶ್ಯವನ್ನು ನೋಡುತ್ತಿದ್ದರೆ ಎಂತವರನ್ನು ಒಂದು ಕ್ಷಣ ಮಂತ್ರಮುಗ್ದಗೊಳಿಸುತ್ತದೆ.

ಧಾರಾಕಾರ ಸುರಿದ ಮಳೆಯಿಂದಾಗಿ ಜಲಪಾತಗಳು ಭೋರ್ಗರೆಯುತ್ತಿವೆ. ಆದರೆ, ಜಲಪಾತಗಳಿಗೆ ಪ್ರವೇಶ ನಿಷೇಧಿಸಲಾಗಿದ್ದು, ನೋ ಎಂಟ್ರಿ ಬೋರ್ಡ್ ಹಾಕಲಾಗಿದೆ. ಹೀಗಾಗಿ ಪ್ರವಾಸಿಗರು ಫಾಲ್ಸ್ ಗಳನ್ನು ಬಿಟ್ಟು ಪ್ರಯಾಣದ ನಡುವೆ ಕಂಡು ಬರುವ ಒಂದಿಷ್ಟು ನೇಚರ್ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

ಆಗುಂಬೆ ವೀವ್ಯೂ ಪಾಯಿಂಟ್ ಗೆ ಬರುತ್ತಿರುವ ಪ್ರವಾಸಿಗರ ದಂಡು ದಿನೇ ದಿನೇ ಹೆಚ್ಚಾಗುತ್ತಿದೆ. ಮಂಜಿನ ಮೋಡದ ನಡುವೆ ನಿಸರ್ಗವನ್ನು ಕಣ್ತುಂಬಿಕೊಂಡು, ಭರ್ಜರಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಡಳಿತ ಮಳೆ ಹಿನ್ನೆಲೆಯಲ್ಲಿ ಆಗುಂಬೆ ಘಾಟಿನಲ್ಲಿ ಘನ ವಾಹನಗಳಿಗೆ ಸಂಚಾರ ನಿಷೇಧ ಮಾಡಿರುವುದರಿಂದ ಆಗುಂಬೆಯ ತಿರುವುನಲ್ಲಿ ಘನ ವಾಹನದ ಭಯವಿಲ್ಲದೆ ಪ್ರವಾಸಿಗರ ದಂಡು ಆಗುಂಬೆ ವೀವ್ಯೂ ಪಾಯಿಂಟ್ ಗೆ ಭೇಟಿ ನೀಡಿ ವಿಕೇಂಡ್ ಎಂಜಾಯ್ ಮಾಡುತ್ತಿದ್ದಾರೆ.

ಏನೇಯಾಗಲಿ ಮಳೆಗಾಲದಲ್ಲಿ ಕೆಲವೊಂದು ಪ್ರವಾಸಿ ತಾಣಗಳು ಹಚ್ಚ ಹಸುರಿನಿಂದ ಜೀವ ಕಳೆ ಪಡೆದುಕೊಂಡು ಪ್ರವಾಸ ಕೈಬೀಸಿ ಕರೆಯುತ್ತದೆ. ಆದರೆ ಮಳೆಗಾಲದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು ಒಳ್ಳೆಯದು.