ಉಡುಪಿ: ಮಲ್ಪೆ ಕಡಲತೀರದ ಸುಮಾರು 8 ಎಕರೆ ಸರ್ಕಾರಿ ಭೂಮಿ ಖಾಸಗಿ ಪರಭಾರೆಯಾಗಿದ್ದು, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಪರಭಾರೆ ವಿಚಾರ ಬಹಿರಂಗವಾದ ತಕ್ಷಣ ಶಾಸಕನ ಮನೆ ಮುಂದೆ ಮೀನುಗಾರರು ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಶಾಸಕರ ಮನೆಗೆ ಮೀನುಗಾರರು ಆಗಮಿಸಿದರು.

ಕರ್ನಾಟಕ ಜಲಸಾರಿಗೆ ಮಂಡಳಿಯ ಒಪ್ಪಿಗೆ ಮೂಲಕ ಉಡುಪಿ ಜಿಲ್ಲಾಮೀನುಗಾರಿಕಾ ಫೆಡರೇಶನ್ ಗೆ ಗುತ್ತಿಗೆ ಪಡೆದಿದ್ದು, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರಾಗಿರುವ ಶಾಸಕ ಯಶ್ಪಾಲ್ ಸುವರ್ಣ ಅವರಿಂದ ಜಾಣ ನಡೆ ಕಂಡಿತು. ಪ್ರತಿ ಚದರ ಮೀಟರ್ ಗೆ 231 ರೂಪಾಯಿ ದರ ನಿಗದಿ ಪಡಿಸಿ ಗುತ್ತಿಗೆ ಪಡೆದ ಆರೋಪ ಕೇಳಿಬಂದಿದೆ.
ಕೆಲ ವರ್ಷದ ಹಿಂದೆ ಹಿಂದಿನ ಶಾಸಕರಿಂದ ಈ ಪ್ರದೇಶ ಸಾಕಷ್ಟು ಅಭಿವೃದ್ಧಿಯಾಗಿತ್ತು. ಗುತ್ತಿಗೆ ಜಾಗವನ್ನು ಪ್ರವಾಸೋದ್ಯಮ ಕೇಂದ್ರ ವಾಗಿ ಹಿಂದಿನ ಶಾಸಕರು ಪರಿವರ್ತಿಸಿದ್ದರು. ಸ್ಥಳೀಯ ಮೀನುಗಾರರ ಭಜನಾ ಮಂದಿರ, ಸಾಂಸ್ಕೃತಿಕ ಕೇಂದ್ರವಿರುವ ಜಾಗವೇ ಈಗ ಪರಬಾರೆಯಾಗಿದೆ.
ಈ ಹಿಂದೆ ಶಾಸಕರ ಜೊತೆ ನಿಂತು ಚುನಾವಣೆಯಲ್ಲಿ ಮತ ಕೇಳಿದವರಿಂದ ಶಾಸಕ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮುಂದೆ ನಿಮ್ಮ ಪರ ಕೆಲಸ ಮಾಡುವುದಿಲ್ಲ ಎಂದು ಸ್ಥಳೀಯ ಮೀನುಗಾರ ಮುಖಂಡರು ಹೇಳಿದ್ದಾರೆ. ಮೀನುಗಾರರು, ಸ್ಥಳೀಯರಿಗೆ ಯಾವುದೇ ಮಾಹಿತಿ ಹೊರಹಾಕದೆ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು, ಸ್ಥಳೀಯ ಮೀನುಗಾರರು ಶಾಸಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

