ತುಮಕೂರು: ಕೇಂದ್ರ ಸರ್ಕಾರವು ಬಿಸಿಯೂಟ ನೌಕರರಿಗೆ ವೇತನ ಹೆಚ್ಚಿಸಬೇಕು ಹಾಗೂ ಕನಿಷ್ಠ ಕೂಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಇಂದಿನಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಹೋರಾಟದ ಭಾಗವಾಗಿ ತುಮಕೂರಿನಲ್ಲಿ ಕೇಂದ್ರ ಸಚಿವರಾದ ವಿ ಸೋಮಣ್ಣರವರ ಮನೆ ಮಂದೆ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಈ ಹೋರಾಟವನ್ನು ಬೆಂಬಲಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ 400 ಕ್ಕೂ ಮಿಕ್ಕಿದ ಬಿಸಿಯೂಟ ನೌಕರರು CITU ನೇತ್ರತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಬದುಕು ನಡೆಸಲು ಪೂರಕವಾದ ಕನಿಷ್ಠ ಕೂಲಿಯನ್ನು ನೀಡದೆ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿಯವರು, ಅತ್ಯಂತ ನಿಕೃಷ್ಠವಾಗಿ ಕೂಲಿಯನ್ನು ಪಡೆದು, ದಮನೀಯ ಬದುಕು ಸಾಗಿಸುತ್ತಿರುವ ಬಿಸಿಯೂಟ ನೌಕರರಿಗೆ ಪ್ರಸ್ತುತ ಸಿಗುತ್ತಿರುವ 4,500/- ವೇತನದಿಂದ ಬದುಕು ಸಾಗಿಸಲು ಖಂಡಿತ ಸಾಧ್ಯವಿಲ್ಲ. ಗೌರವಧನದ ಹೆಸರಿನಲ್ಲಿ ಅಗೌರವ ತೋರಿಸುತ್ತಾ,ಮಾತೆ ಮಾತೆ ಎಂದು ಬೊಗಳೆ ಬಿಡುತ್ತಾ ಬಿಸಿಯೂಟ ನೌಕರರಾದ ಎಲ್ಲಾ ಮಹಿಳೆಯರನ್ನು ಕೀಳಾಗಿ ಕಾಣುವ ಕೇಂದ್ರ ಸರ್ಕಾರದ ವಿರುದ್ಧ ಸಮರಧೀರ ಹೋರಾಟಕ್ಕೆ ಅಣಿಯಾಗಬೇಕೆಂದು ಕರೆ ನೀಡಿದರು.

CITU ದ.ಕ.ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, 2001ರಲ್ಲಿ ಜಾರಿಗೆ ಬಂದತಹ ಬಿಸಿಯೂಟ ಯೋಜನೆಗೆ 2014ರಲ್ಲಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ನಿರಂತರವಾಗಿ ತನ್ನ ಪಾಲನ್ನು ಕಡಿತಗೊಳಿಸುತ್ತಾ ಬಂದಿದೆ. ದೇಶಾದ್ಯಂತ 26ಕ್ಕೂ ಮಿಕ್ಕಿದ ಬಿಸಿಯೂಟ ನೌಕರರು, ಸರಕಾರದ ಆದೇಶದಲ್ಲಿ 4 ಗಂಟೆಯ ಕೆಲಸವೆಂದು ಹೇಳಿದ್ದರೂ 8 ಗಂಟೆಯಷ್ಟು ದುಡಿಯುತ್ತಿದ್ದರೂ ಸರಕಾರಗಳು ಮಾತ್ರ ದಿವ್ಯಮೌನ ವಹಿಸಿದೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು, ಮುಂಬರುವ ಬಜೆಟ್ ನಲ್ಲಿ ಕನಿಷ್ಠ ವೇತನ ಜಾರಿಯಾಗಬೇಕು, ಯಾವುದೇ ಕಾರಣಕ್ಕೂ ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಬಾರದು, ILC ಶಿಫಾರಸ್ಸಿನಂತೆ ಖಾಯಂ ಉದ್ಯೋಗಸ್ಥರಂತೆ ಪರಿಗಣಿಸಿ ಎಲ್ಲಾ ಶಾಸನಬದ್ದ ಸವಲತ್ತುಗಳನ್ನು ನೀಡಬೇಕು ಮುಂತಾದ ಬೇಡಿಕೆಗಳ ಬಗ್ಗೆ ಗಮನ ಸೆಳೆದರು.

ಹೋರಾಟವನ್ನು ಬೆಂಬಲಿಸಿ ಬೀಡಿ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ಜಯಂತ ನಾಯಕ್, ಸಮುದಾಯ ಸಂಘಟನೆಯ ಹಿರಿಯ ನಾಯಕರಾದ ವಾಸುದೇವ ಉಚ್ಚಿಲ್ ರವರು ಮಾತನಾಡಿದರು. ಪ್ರತಿಭಟನೆ ಯಲ್ಲಿ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಸುಂದರ ಕುಂಪಲ, ಪ್ರಮೋದಿನಿ, ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ನಾಯಕರಾದ ರೇಖಾಲತಾ, ಬಬಿತಾ, ಲೀಲಾವತಿ, ಮೋಹಿನಿ, ಶೋಭಾ, ಸುಶೀಲಾ, ಚಿತ್ರಾವತಿ, ಸಬೀನಾ ಮುಂತಾದವರು  ಭಾಗವಹಿಸಿದ್ದರು.