ಶಿವಮೊಗ್ಗ: ಮೀನು ಹಿಡಿಯಲು ಹೋಗಿ ವಾಪಸ್ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪ ನಡೆದಿದೆ.
ಅತಿಶಯ (24) ಎಂಬ ಯುವಕ ಸಾವನ್ನಪ್ಪಿದ್ದಾನೆ. ಯಡೂರು ಸಮೀಪ ಮತ್ತಿಗ ಬಳಿ ಮೀನು ಹಿಡಿಯಲು ಹೋಗಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ. ಇನ್ನೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಉಡುಪಿಯ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ತೀರ್ಥಹಳ್ಳಿಯ ಬುಕ್ಲಾಪುರ ಹಾಗೂ ಹೊರಬೈಲಿನ ಐವರು ಯುವಕರು ಮೀನು ಹಿಡಿಯಲು ಕಾರಿನಲ್ಲಿ ಹೋಗಿದ್ದರು. ಮೀನು ಹಿಡಿದು ಹಿಂದಿರುಗುವಾಗ ಕಾರು ಪಲ್ಟಿಯಾಗಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ಮೂವರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಹಾಗೂ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ad