ಶಿವಮೊಗ್ಗ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಐಎಎಸ್ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದ ಅಂಧ ಬಾಲಕಿ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 13 ಜನರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರಾಗಿದ್ದ ಇವರು ದೇವರ ದರ್ಶನಕ್ಕೆಂದು ಹೊರಟ್ಟಿದ್ದರು.
ಈ ವೇಳೆ ಅಪಘಾತ ಸಂಭವಿಸಿ 13 ಜನರು ಅಸುನೀಗಿದ್ದಾರೆ. ಸಾವನ್ನಪ್ಪಿದವರ ಪೈಕಿ ಮಾನಸ ಎಸ್ ಎಂಬ ಬಾಲಕಿ ಕೂಡ ಇದ್ದಳು. ಅಂಧ ಬಾಲಕಿಯಾಗಿದ್ದ ಮಾನಸ ಐಎಎಸ್ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದಳು.
MSC ಪೂರ್ತಿಗೊಳಿಸಿದ ಮಾನಸ ಬೆಂಗಳೂರಿನಲ್ಲಿ IAS ಕೋಚಿಂಗ್ ತೆಗೆದುಕೊಳ್ಳುತ್ತಿದ್ದಳು. ಮಾತ್ರವಲ್ಲದೆ ಮಾನಸ ಅಂಧರ ಕ್ರೀಡಾ ಕೂಟಗಳಲ್ಲಿ ಸಾಧನೆ ಮಾಡಿ ಮೆರೆದಿದ್ದಳು. ಈ ಪ್ರತಿಭಾವಂತೆ ಅಂಧರ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕಿಯಾಗಿದ್ದಳು.
ಹುಟ್ಟುತ್ತಲೇ ಅಂಧೆಯಾಗಿದ್ದ ಮಾನಸ ಪಂಜಾಬ್ ಹಾಗೂ ದೆಹಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಮನೆಯವರ ಮತ್ತು ಊರಿಗೆ ಒಳ್ಳೆಯ ಹೆಸರು ತಂದಿದ್ದಳು. ಮಾತ್ರವಲ್ಲದೆ, ಕರ್ನಾಟಕದ ಅಂಧರ ಬಾಲಕಿಯರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಳು.