ಉತ್ತರ ಕನ್ನಡ: ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡಜಿಲ್ಲೆಯ ಅರಬ್ಬಿ ಸಮುದ್ರ ತೀರ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ಇರುವ ಪರಿಣಾಮ ಬಂದರಿನಲ್ಲಿ ಮೀನುಗಾರಿಕಾ ಬೋಟುಗಳಿಗೆ ಲಂಗರು ಹಾಕಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಅಬ್ಬರದ ಮಳೆ ಸುರಿಯುತ್ತಿದೆ. ಹೆಚ್ಚಿನ ಮಳೆಯಾಗುವ ಸಾಧ್ಯತೆಯಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಆರು ದಿನಗಳ ಕಾಲ ಉತ್ತಮ ಮಳೆಯಾಗುವ ಸೂಚನೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಸಹ ಸಮುದ್ರ ತೀರ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಮೀನುಗಾರಿಕೆಗೂ ಸಹ ಎರಡು ತಿಂಗಳು ನಿಷೇಧ ಹೇರಲಾಗಿದೆ.
ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜಲಪಾತಗಳಲ್ಲಿ ಜೀವಕಳೆ ಬಂದಿದೆ. ಮಾಗೋಡು, ವಿಭೂತಿ ಜಲಪಾತ, ಬಂಗಾರದ ಕುಸುಮ ಜಲಪಾತಗಳಲ್ಲಿ ನೀರು ಹರಿದುಬರುತ್ತಿದ್ದು, ಇದೀಗ ಕಾರವಳಿ ತೀರಕ್ಕೆ ಬರುವ ಪ್ರವಾಸಿಗರನ್ನು ಜಲಪಾತದತ್ತ ಸೆಳೆಯುತ್ತಿದೆ.

