ರಾಮನಗರ: ಸೋತಿದ್ದೀನಿ ಅಂತಾ ಸುಮ್ನೆ ಕೂರುವುದಿಲ್ಲ. ನಿಮ್ಮೆಲ್ಲರಿಗೂ ಒಂದು ಕೊರಗಿತ್ತು. ನಿಮ್ಮ ಮನೆಗೆ ಬರಲ್ಲ ಅಂತಿದ್ರೀ, ಇನ್ಮುಂದೆ ನಿಮ್ಮ ಮನೆಗೂ ಬರ್ತಿನಿ, ನಿಮ್ಮ ಬೀದಿಗೂ ಬರ್ತಿನಿ ಎಂದು ಡಿಕೆ ಸುರೇಶ್ ಭಾವುಕರಾಗಿ ನುಡಿದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಅವರಿಗೆ ಸೋಲಾಗಿದ್ದು, ಈ ಹಿನ್ನೆಲೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ್ದಾರೆ.
ಕನಕಪುರದ ಡಿಕೆ ಶಿವಕುಮಾರ್ ನಿವಾಸದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಡಿಕೆ ಸುರೇಶ್ ಕಣ್ಣೀರು ಹಾಕಿದ್ದಾರೆ.
ನಾನು ಬದುಕಬೇಕು, ಬಾಳಬೇಕು ನನ್ನ ಕೆಲಸಾನೂ ನೋಡಬೇಕು. ಅದೆಲ್ಲದರ ಜೊತೆ ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ಜೊತೇಲಿ ಇದ್ದು ಮಾಡ್ತೀನಿ. ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ಹೇದರಿಕೊಳ್ಳಬೇಡಿ. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದು ಡಿಕೆ ಸುರೇಶ್ ಗದ್ಗದಿತರಾದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾಕ್ಟರ್ ಮಂಜುನಾಥ್ ಅವರು ಬರೋಬ್ಬರಿ 2,69,647 ಮತಗಳ ಅಂತರದಿಂದ ಡಿ.ಕೆ.ಸುರೇಶ್ ಅವರನ್ನು ಪರಾಭವ ಗೊಳಿಸಿದ್ದರು.

