ಸಾಲಿಗ್ರಾಮ: ನಮ್ಮ ಪಕ್ಷದಲ್ಲಿ ಗುರುತಿಸಿಕೊಂಡು, ನಮ್ಮಿಂದಲೇ ಬೆಳೆದು ಅಧಿಕಾರ ಪಡೆದು, ಸಾಕಷ್ಟು ಅನುಕೂಲ ಪಡೆದ ಕೆಲವರು ನನ್ನ ಹಾಗೂ ಪಕ್ಷದ ವಿರುದ್ದವೇ ನಿಂತು ಬೆನ್ನಿಗೆ ಚೂರಿ ಹಾಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಶಾಸಕ ಸಾ.ರಾ ಮಹೇಶ್ ಹೇಳಿದ್ದಾರೆ.
ಸಾಲಿಗ್ರಾಮ ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕುಡಿಯುವ ನೀರು, ರಸ್ತೆ, ವಿದ್ಯುತ್, ಶಿಕ್ಷಣ, ಆಸ್ಪತ್ರೆ, ಸಮುದಾಯ ಭವನಗಳು, ರೈತಾಪಿ ವರ್ಗಕ್ಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೀವು ಕೊಟ್ಟ ಅಧಿಕಾರದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅನುದಾನವನ್ನು ಈ ತಾಲೂಕಿಗೆ ತಂದು. ಎಲ್ಲಾ ವರ್ಗಗಳ ಮತದಾರರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯನ್ನು ಒಬ್ಬ ಶಾಸಕನಾಗಿ ಪ್ರಾಮಾಣಿಕವಾಗಿ ನನ್ನ ಶಕ್ತಿ ಮೀರಿ ವೈಯಕ್ತಿಕವಾಗಿಯೂ ಸಹಾಯ ಮಾಡಿರುವ ತೃಪ್ತಿ ನನಗಿದೆ ಎಂದರು.
ಹೆಣ್ಣು ಮಕ್ಕಳು ದೂರದೂರುಗಳಿಗೆ ಕೆಲಸಕ್ಕಾಗಿ ಬೆಳಗ್ಗೆ 6 ಘಂಟೆಗೆ ಮನೆ ಬಿಟ್ಟು ರಾತ್ರಿ ಮನೆ ಸೇರುತ್ತಿದ್ದರು. ಅವರ ಕುಟುಂಬ ನಿರ್ವಹಣೆಯ ಕಷ್ಟ ಅರಿವು ನನಗಿರುವ ಕಾರಣ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಿ ಮಾಡಿರದಂತ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸಿ ಇಂದು ಒಂದು ಸಾವಿರ ಹೆಣ್ಣು ಮಕ್ಕಳಿಗೆ ಕೆಲಸ ನೀಡಿ 70 ಸಾವಿರ ಕಟುಂಬದ ಹೆಣ್ಣು ಮಕ್ಕಳನ್ನು ಷೇರುದಾರರನ್ನಾಗಿ ಮಾಡಿ ಬರುವಂತ ಆದಾಯವನ್ನು ಅವರಿಗೆ ನೀಡುತ್ತಿರುವುದು ನನ್ನ ಕ್ಷೇತ್ರದ ಹೆಣ್ಣು ಮಕ್ಕಳು, ತಾಯಂದಿರ ಮೇಲೆ ನನಗಿರುವ ಅಪಾರ ಕಾಳಜಿ ಎಂದರು.
ಬೇರೆಯವರು ಮತಕ್ಕಾಗಿ ಕಣ್ಣೀರು ಹಾಕುತ್ತಾರೆ. ನಾನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ, ನಮ್ಮನ್ನ ಕಾಯುತ್ತಾನೆ ಎನ್ನುವ ಭಾವನೆ ಇದ್ದರೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ ಎನ್ನುವ ಭರವಸೆ ಇದ್ದರೆ ನನಗೆ ಮತಕೊಟ್ಟು ಗೆಲ್ಲಿಸಿ ನಾನು ಕೂಡ ಮನುಷ್ಯನೇ ನಾನು ಕೂಡ ಕಣ್ಣೀರು ಹಾಕಿದ್ದೇನೆ ನನ್ನ ಬೆನ್ನಿಗೆ ಚೂರಿ ಹಾಕಿದವರನ್ನು ನೆನೆದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಲಾಲು ಸಾಹೇಬರು, ಎಂ.ಟಿ ಕುಮಾರ್, ನಾಗೇಂದ್ರ, ಪಾಪಣ್ಣ, ಆಯಾಜ್, ನಟರಾಜು, ಹನಸೋಗೆ ನಾಗರಾಜು, ಹಂಪಾಪುರ ಕುಮಾರ್, ಗಗ್ಗೆರೆ ಕುಚೇಲ, ಗ್ರಾ.ಪಂ ಅಧ್ಯಕ್ಷ ಲಕ್ಷ್ಮಿ ಸೋಮಶೇಖರ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.