ಮೈಸೂರು: ಪಿಯು ಕಾಲೇಜಿಗೆ ಉಪ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಿಎಆರ್ ಮುಖ್ಯಪೇದೆ ಹಾಗೂ ಪತ್ನಿ 7.45 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಸಿಎಆರ್ ಮುಖ್ಯಪೇದೆ ಚೆನ್ನಕೇಶವ, ಇವರ ಪತ್ನಿ ಮಮತ ಹಾಗೂ ಟ್ರಸ್ಟ್ ನ 5 ಮಂದಿ ಸದಸ್ಯರುಗಳ ಮೇಲೆ ಪ್ರಕರಣ ದಾಖಲಾಗಿದೆ. ಅಕ್ಷರ ಫೌಂಡೇಶನ್ ನ ಸಂಸ್ಥಾಪಕರಾದ ಸುನಿಲ್ಎಂಬುವರಿಗೆ ವಂಚನೆ ಆಗಿದೆ.
ಅಕ್ಷರ ಫೌಂಡೇಷನ್ ಸಂಸ್ಥಾಪಕರಾದ ಸುನಿಲ್ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಇಮೇಜ್ ಗಳಿಸಿದ್ದಾರೆ. ಸಾಕಷ್ಟು ಹೆಸರನ್ನೂ ಗಳಿಸಿದ್ದಾರೆ.ಸಿಎಆರ್ ಮುಖ್ಯಪೇದೆ ಚೆನ್ನಕೇಶವ ರವರು ರಾಮಕೃಷ್ಣನಗರದಲ್ಲಿ ಗುರುಕಲ್ಪ ಟ್ರಸ್ಟ್ ಮೂಲಕ ವಿಶ್ವಮಾನವ ಪಿಯು ಕಾಲೇಜ್ ನಡೆಸುತ್ತಿದ್ದಾರೆ. ಇದಕ್ಕೆ ಚೆನ್ನಕೇಶವ ಇವರ ಪತ್ನಿ ಮಮತಾ ಹಾಗೂ 5 ಮಂದಿ ಟ್ರಸ್ಟಿಗಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸುನಿಲ್ ರವರನ್ನ ವಿಶ್ವಮಾನವ ಪಿಯು ಕಾಲೇಜ್ ಗೆ ಉಪಪ್ರಾಂಶುಪಾಲರಾಗಿ ಬರುವಂತೆ ಚೆನ್ನಕೇಶವ ಕೇಳಿಕೊಂಡಿದ್ದಾರೆ. ಚೆನ್ನಕೇಶವ ಅವರ ಆಫರ್ ನ್ನ ಸುನಿಲ್ ಆರಂಭದಲ್ಲಿ ತಿರಸ್ಕರಿಸಿದ್ದಾರೆ. ಆದರೆ ಪಟ್ಟುಬಿಡದ ಚೆನ್ನಕೇಶವ ದುಂಬಾಲು ಬಿದ್ದು ಉತ್ತಮ ವೇತನ ನೀಡುವ ಆಮಿಷ ಒಡ್ಡಿದ್ದಾರೆ. ಉತ್ತಮ ವೇತನ ದೊರೆಯುವ ಭರವಸೆ ನೀಡಿದ ಹಿನ್ನಲೆ ಸುನಿಲ್ ಆಫರ್ ಒಪ್ಪಿಕೊಂಡಿದ್ದಾರೆ.
ಕೆಲವು ದಿನಗಳು ವಿಶ್ವಮಾನವ ಪಿಯು ಕಾಲೇಜಿನ ಪ್ರತಿನಿಧಿಯಾಗಿ ಹಲವಾರು ಶಾಲೆಗಳಿಗೆ ತೆರಳಿ ವಿಧ್ಯಾರ್ಥಿಗಳಿಗೆ ಕ್ಯಾಂಪೇನ್ ಮಾಡಿದ್ದಾರೆ. ಕೆಲವು ದಿನಗಳ ನಂತರ ಕಾಲೇಜ್ ಗೆ ಹಣದ ಕೊರತೆ ಇರುವುದರಿಂದ ಚೆನ್ನಕೇಶವ ಆರ್ಥಿಕ ಸಹಾಯ ಕೇಳಿದ್ದಾರೆ. 10 ಲಕ್ಷ ನೀಡಿದರೆ ಗುರುಕಲ್ಪ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡಿಕೊಳ್ಳುವ ಆಫರ್ ನೀಡಿದ್ದಾರೆ. ಸುನಿಲ್ ರವರಿಗೆ 10 ಹೊರೆ ಎಂದೆನಿಸಿ ಆಫರ್ ನಿರಾಕರಿಸಿದ್ದಾರೆ. ಆದರೆ ಪಟ್ಟು ಬಿಡದ ಚೆನ್ನಕೇಶವ ಪತ್ನಿ ಮಮತಾ ರವರ ಜೊತೆ ಬಂದು ಸುನಿಲ್ ರವರನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣ ಹೂಡಿಕೆ ವಿಚಾರದಲ್ಲಿ ತಮ್ಮ ಸಂಬಂಧಿಕರಾದ ಛಾಯಾದೇವಿ ಎಂಬುವರ ಬಳಿ ಪ್ರಸ್ತಾಪಿಸಿದ ಸುನಿಲ್ ಇ ಚೆನ್ನಕೇಶವ ರವರಿಗೆ 10 ಲಕ್ಷ ನೀಡಿದ್ದಾರೆ. ಈ ವೇಳೆ ಟ್ರಸ್ಟಿಯಾಗಿ ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿ ಅಗ್ರೀಮೆಂಟ್ ಗೆ ಸಹಿ ಹಾಕಿ ಹಣದ ಭದ್ರತೆಗಾಗಿ ಚೆಕ್ ಗಳನ್ನ ನೀಡಿದ್ದಾರೆ. ಹಣ ಕೊಟ್ಟು ತಿಂಗಳುಗಳು ಉರುಳಿದರೂ ಟ್ರಸ್ಟಿಯಾಗಿ ಮಾಡಿಕೊಳ್ಳಲು ಚೆನ್ನಕೇಶವ ಆಸಕ್ತಿ ತೋರಿಸದೆ ಯೂ ಟರ್ನ್ ಹೊಡೆದಿದ್ದಾರೆ.
ಸದ್ಯ ಟ್ರಸ್ಟಿಯಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ ನಿಮ್ಮ ಹಣ ಸಾಲ ಎಂದು ಪರಿಗಣಿಸಿ ಬಡ್ಡಿ ನೀಡುವುದಾಗಿ ತಿಳಿಸಿದ್ದಾರೆ. ಟ್ರಸ್ಟಿಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಚೆನ್ನಕೇಶವ ಹಾಗೂ ಪತ್ನಿ ಮಮತಾ ಉಡಾಫೆ ಉತ್ತರ ಕೊಟ್ಟಿದ್ದಾರೆ. ಟ್ರಸ್ಟಿಯೂ ಆಗದೆ ಉಪಪ್ರಾಂಶುಪಾಲರನ್ನಾಗಿಯೂ ಮಾಡದೆ ಚೆನ್ನಕೇಶವ ವಂಚಿಸಿದ್ದಾರೆ. ಹಣ ಹಿಂದಿರುಗಿಸುವಂತೆ ಸುನಿಲ್ ಪಟ್ಟು ಹಿಡಿದಾಗ ಇತರರಿಂದ 2.55 ಲಕ್ಷ ಹಿಂದಿರುಗಿಸಿ ಉಳಿದ ಹಣ ನೀಡದೆ ಸತಾಯಿಸಿದ್ದಾರೆ.
ಚೆನ್ನಕೇಶವ ನೀಡಿದ ಚೆಕ್ ಗಳು ಬೌನ್ಸ್ ಆಗಿದೆ. ನೇರೆ ದಾರಿ ಕಾಣದೆ ಸುನಿಲ್ ಪೊಲೀಸರ ಮೊರೆ ಹೋಗಿದ್ದಾರೆ. ಚೆನ್ನಕೇಶವ ಮತ್ತೊಮ್ಮೆ ಕೊಟ್ಟ ಚೆಕ್ ಗಳೂ ಸಹ ಬೌನ್ಸ್ ಆಗಿವೆ.ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚೆನ್ನಕೇಶವ ಹಣ ಹಿಂದಿರುಗಿಸದೆ ಏನು ಬೇಕಾದ್ರೂ ಮಾಡೊಕೋ ಎಂದು ಉಡಾಫೆಯಿಂದ ವರ್ತಿಸಿದ್ದಾರೆ. ಅನ್ಯಮಾರ್ಗ ಕಾಣದ ಸುನಿಲ್ ರವರು ಚೆನ್ನಕೇಶವ ಇವರ ಪತ್ನಿ ಮಮತ ಹಾಗೂ ಗುರುಕಲ್ಪ ಟ್ರಸ್ಟ್ ನ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

