ಮೈಸೂರು: ಒಬ್ಬ ಲೇಖಕ ಅಥವಾ ಪತ್ರಕರ್ತ ಸಾಮಾಜಿಕ ಬದ್ಧತೆಯ ಬಗ್ಗೆ ಮಾತನಾಡಬಾರದು, ಬದಲಿಗೆ ಅದಕ್ಕೆ ಪ್ರತಿಕ್ರಿಯಿಸಬೇಕು ಎಂದು ಲೇಖಕ ಜೋಗಿ ಅಭಿಪ್ರಾಯಪಟ್ಟರು.
ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಮೈಸೂರು ಸಾಹಿತ್ಯ ಸಂಭ್ರಮ 7ನೇ ಆವೃತ್ತಿಯ ಗೋಷ್ಠಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಸಾಹಿತಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕು ಎಂಬುದನ್ನು ಕೇಳುತ್ತಿರುತ್ತೇವೆ. ಇಷ್ಟಕ್ಕೂ ಇದು ಹೇಳುವಂತದ್ದಲ್ಲ, ಮಾಡುವಂತದ್ದು. ಇಷ್ಟಕ್ಕೂ ಹೇಳುವವರು ಓದಿಯೇ ಇರುವುದಿಲ್ಲ. ಇನ್ನು ಪತ್ರಕರ್ತರು ಅಥವಾ ಲೇಖಕರು ತಮ್ಮ ಬರವಣಿಗೆಯಲ್ಲಿ ಸಾಮಾಜಿಕ ಬದ್ಧತೆ ಇದೆಯೇ ಎಂಬುದನ್ನು ಓದಿಕೊಳ್ಳಬೇಕು ಎಂದರು.
ಪಶ್ಚಿಮಘಟ್ಟ ಹೊತ್ತಿ ಉರಿದಾಗ ತೇಜಸ್ವಿ ಅವರು ಚಿದಂಬರ ರಹಸ್ಯ ಬರೆದರು. ಅದು ಅವರ ಪ್ರತಿಕ್ರಿಯೆ ಆಗಿತ್ತು. ಬೇರೆಯವರಂತೆ ಗಂಟಲು ಅರಚಬಾರದು. ಲೇಖಕನಾದವನು ಹೋರಾಟಗಾರರಂತೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆತನಿಗೆ ಅವನದೇ ಆದ ವೇದಿಕೆ ಇದೆ. ಅದರೆ ಇಂದು ಸಾಮಾಜಿಕ ಜಾಲತಾಣ ಒತ್ತಡ ಹೇರುವ ಕ್ಷೇತ್ರವಾಗಿದೆ ಎಂದು ಹೇಳಿದರು.
ಜೀವನದಲ್ಲಿ ಹೋರಾಟ ಕಾಣಬೇಕು. ಹೋರಾಟದಲ್ಲಿ ಜೀವನ ಕಾಣಬಾರದು. ನಾನು ಜೀವನದಲ್ಲಿ ಉತ್ತರ ಸಿಗಲಿಲ್ಲ ಎಂದರೆ ಕಥೆ ಬರೆಯುತ್ತೇನೆ. ಬೇರೆಯವರ ಅನುಭವವನ್ನು ಬರೆಸಿ, ಅವರೊಟ್ಟಿಗೆ ಮಾತನಾಡಿದ್ದು, ಪ್ರಭಾವ ಬೀರಿದ ವ್ಯಕ್ತಿಗಳಿಂದ ಕಥೆ ಬರೆಯುತ್ತೇನೆ. ಯಾವುದೇ ಪಾತ್ರ ಸ್ಪಷ್ಟೀಕರಣ ಕೊಡದಿದ್ದರೆ ಆ ಪಾತ್ರದ ಜೊತೆ ಕಥೆಯೂ ಸಾಯುತ್ತದೆ. ಜೀವನದ ಹುಡುಕಾಟವೇ ಕಥೆಯಾಗಿದೆ ಎಂದರು.
ಬೇರೆಯವರ ಅನುಭವ ಬರೆಯವುದು ಬೇರೆ. ಅವರ ಕಥೆ ಬರೆಯುವಾಗ ಪಾಪಪ್ರಜ್ಞೆ ಇರುವುದಿಲ್ಲ. 20 ರಿಂದ 50ರ ವಯಸ್ಸನ್ನು ಹಣಕ್ಕಾಗಿ ಬೇರೆಯವರಿಗೆ ಅನುಭವನ್ನು ಧಾರೆ ಎರೆಯುತ್ತಾರೆ. ಹೆಚ್ಚು ಬರೆಯುವುದು ಅಪರಾಧ. ಆದರೆ ಅದಕ್ಕೆ ಶಿಕ್ಷೆ ಇಲ್ಲ. ನನಗೆ ನಿದ್ರೆ ಬರುವುದಿಲ್ಲ. ಮೂರು ಗಂಟೆ ನಿದ್ರೆ ಮಾಡುತ್ತೇನೆ. ಆಗ ಪುಸ್ತಕ ಬರೆಯುತ್ತೇನೆ ಎಂದು ಅವರು ಹೇಳಿದರು.
ಕಾದಂಬರಿಯಲ್ಲಿ ಒಬ್ಬ ವ್ಯಕ್ತಿ ಎಂಬುದು ಇದ್ದರೆ ಆಸಕ್ತಿ ಕಡಿಮೆ ಆಗುತ್ತದೆ. ನಾನು ದೆಹಲಿ ಬಗ್ಗೆ ಹೇಳಬೇಕಿತ್ತು. ಅದನ್ನು ಹೇಳಿದೆ. ಇನ್ನು ಸಹದೇವ ಕಾದಂಬರಿಯಲ್ಲಿ ಅಂದಿನ ಸಹದೇವ ಹುಟ್ಟಿದ್ದರೆ ಈಗ ಹೇಗಿರುತ್ತಿದ್ದ ಎಂಬುದನ್ನು ಬರೆದಿದ್ದೇನೆ ಅಷ್ಟೆ. ಆ ಪುಸ್ತಕದಲ್ಲಿ ಒಳ ಸಾಲು ಇರುತ್ತದೆ. ಎಂತದ್ದೆ ಕೆಟ್ಟ ಸಿನಿಮಾವಾದರೂ ಒಂದು ಒಳ್ಳೆಯ ಸಂದರ್ಭ ಇರುತ್ತದೆ. 50 ವರ್ಷ ಪೂರ್ತಿ ಜೀವನ ನಡೆಸಿದರೂ ಸುಖ ಇರುವುದಿಲ್ಲ, ಸಿಗುವ ಒಂದು ಸಣ್ಣ ಸುಖಕ್ಕೆ ಇಡೀ ಜೀವನ ಎದುರಿಸಲೇಬೇಕು ಎಂದರು.
ಯುವ ಲೇಖಕ ದಾದಾಪೀರ್ ಜೈಮಾನ್ ಮಾತನಾಡಿ, ಕಥೆ ಎಂಬುದು ಪ್ರತಿ ಬಾರೀ ಬದಲಾಗುತಿರುತ್ತದೆ. ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದು ಕಷ್ಟ. ಬರಹಗಾರನ ನಿಲುವು ಬೇರೆ ಇರುತ್ತ. ಹುಡುಕುವೇ ಬರಹಗಾರ ಹೊಣೆ. ಇದು ನಾವು ಸಂಕೀರ್ಣ ಕಾಲದಲ್ಲಿ ಬದುಕುತ್ತೇವೆ. ಕವಿ ಅಪ್ ಡೇಟ್ ಅಗಬೇಕು. ಸ್ಪಂದನೆ ಬಹಳ ಮುಖ್ಯ. ಯಾವ ಮಾಧ್ಯಮ ಕೂಡ ಶ್ರೇಷ್ಠ, ಕನಿಷ್ಠ ಎಂಬುದಿಲ್ಲ ಎಂದರು.