ನಂಜನಗೂಡು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಶೌಚಮುಕ್ತ ನಗರಸಭೆಗಳಾಗಿ ಪರಿವರ್ತಿಸಲು ಆಳಿದ ಆಳುವ ಸರ್ಕಾರಗಳು ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿವೆ. ಶೌಚಾಲಯದ ಅಭಿವೃದ್ಧಿಯ ಹೆಸರಿನಲ್ಲಿ ಲೆಕ್ಕವೇ ಇಲ್ಲದಷ್ಟು ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ.
ಆದರೆ, ದುರಂತ ದಕ್ಷಿಣ ಕಾಶಿ ನಂಜನಗೂಡಿನ ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಿದ ಶೌಚಾಲಯಗಳ ಪರಿಸ್ಥಿತಿ ನೋಡಿದರೆ ಇಡೀ ನಗರಸಭಾ ಆಡಳಿತವನ್ನು ನಾಚಿಸುವಂತಿದೆ.
ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ಚಾಮರಾಜನಗರ ಬೈಪಾಸ್ ರಸ್ತೆಯ ಹೆಜ್ಜೆಗೆ ಸೇತುವೆಯ ಬಳಿ ಬರೋಬರಿ 25 ಲಕ್ಷ ರೂ.ಗಳ ವೆಚ್ಚದಲ್ಲಿ ಪುರುಷ ಮತ್ತು ಮಹಿಳಾ ಶೌಚಾಲಯ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಯಾವೊಬ್ಬ ಸಾರ್ವಜನಿಕ ವ್ಯಕ್ತಿಯು ಕೂಡ ಅಲ್ಲಿಗೆ ಇದುವರೆಗೂ ದಾವಿಸಿ ಉಪಯೋಗಿಸುತ್ತಿಲ್ಲ.
ಯಾವ ಸಾಲಿನಲ್ಲಿ ನಿರ್ಮಾಣವಾಗಿದೆ ಎಂಬುವುದನ್ನು ಅಳವಡಿಸಿರುವ ನಾಮಫಲಕದಲ್ಲಿ ನಾಪತ್ತೆಯಾಗಿರುವುದು ಹಲವಾರು ಸಂಶಯಗಳಿಗೆ ಹೆಡೆ ಮಾಡಿಕೊಟ್ಟಿದೆ. ಹಳ್ಳದ ಕೇರಿಯ ಸಮೀಪದ ದೇವರಸನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಸಾರ್ವಜನಿಕ ಶೌಚಾಲಯ ಕೊಠಡಿ ನಿರ್ಮಾಣ ಮಾಡಿ 10 ವರ್ಷ ಕಳೆದಿದೆ ಇದುವರೆಗೂ ಬಳಕೆ ಮಾತ್ರ ಮಾಡಿಲ್ಲ.
ನಗರದ ಹೃದಯ ಭಾಗ ಎನಿಸಿಕೊಂಡಿರುವ ಸಾರ್ವಜನಿಕ ಹಳೇ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಇರುವ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿ ನಾಲ್ಕೈದು ವರ್ಷಗಳು ಕಳೆದಿದೆ ಬಳಕೆ ಮಾಡದೆ ಬಂದ್ ಮಾಡಲಾಗಿದೆ. ಇನ್ನೂ ಅಶೋಕಪುರಂ ಬಡಾವಣೆ, ಸರಸ್ವತಿ ಕಾಲೋನಿ, ರಾಜಾಜಿ ಕಾಲೋನಿ ಬಡಾವಣೆಗಳಲ್ಲಿ ನಿರ್ಮಾಣ ಮಾಡಿರುವ ಶೌಚಾಲಯಗಳ ನಿರ್ವಹಣೆ ಇಲ್ಲದೆ ಅದೋಗತಿಗೆ ತಲುಪಿವೆ.
ಬಡ ಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದ ಮೇಲೆ ನಿರ್ಮಾಣ ಮಾಡುವ ಅವಶ್ಯಕತೆ ಏಕೆ ? ಎಂಬುವುದು ಕೇವಲ ಸಾಮಾನ್ಯ ಪ್ರಜೆ ಒಬ್ಬರು ಕೂಡ ಪ್ರಶ್ನೆ ಮಾಡುವ ವಾಕ್ಯವಾಗಿದೆ ಆದರೆ ನಗರಸಭಾ ಅಧಿಕಾರಿಗಳಿಗೆ ಯಾಕಾಗಿ ಪ್ರಜ್ಞೆ ಇಲ್ಲ ಹಾಗಾದ್ರೆ ಶೌಚಾಲಯದ ನಿರ್ಮಾಣದ ಹೆಸರಿನಲ್ಲಿ ನಗರಸಭಾ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮಿಲಾಗಿ ಮಂಜೂರಾಗುವ ಹಣವನ್ನು ಲಪಟಾಯಿಸಿದ್ದಾರೆ ಎಂಬ ಯಕ್ಷ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಶೌಚಾಲಯದ ಅಭಿವೃದ್ಧಿಯ ಹೆಸರಿನಲ್ಲಿ ಬಡಜನರ ತೆರಿಗೆ ಹಣವನ್ನು ಪೋಲು ಮಾಡಿರುವ ನಗರಸಭಾ ಇಲಾಖೆ ಆಯುಕ್ತರು ಮತ್ತು ಇಂಜಿನಿಯರ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕಿದೆ.

