ನಂಜನಗೂಡು: ವಿದ್ಯುತ್ ತಂತಿ ತಗುಲಿ ಕಬ್ಬು ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೊರಳವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಸಿದ್ದರಾಜು ಎಂಬುವವರಿಗೆ ಸೇರಿದ ಕಬ್ಬು ಬೆಳೆಯಾಗಿದ್ದು, ಸುಮಾರು ಎರಡು ಎಕರೆ ಪ್ರದೇಶದಲ್ಲಿ ಸಾಲಸೋಲ ಮಾಡಿ ಬೆಳೆದಿದ್ದ ಕಬ್ಬು ಬೆಳೆಗೆ ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಮತ್ತು ಜಮೀನಿನಲ್ಲೇ ಇರುವ ಟ್ರಾನ್ಸ್ ಫಾರ್ಮರ್ ನಿಂದ ಬೆಂಕಿ ಕಾಣಿಸಿಕೊಂಡು ಕಬ್ಬು ಬೆಳೆಗೆ ತಗುಲಿದೆ.
ಇದರಿಂದ ಸಂಪೂರ್ಣವಾಗಿ ಕಬ್ಬು ಬೆಳೆ ಸುಟ್ಟು ಕರಕಲಾಗಿದೆ. ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಬ್ಬು ಬೆಳೆ ನಾಶವಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಈ ಕೂಡಲೇ ಸರ್ಕಾರ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

