ಮೈಸೂರು: ಗಣಪತಿ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಲು ನಿರಾಕರಿಸಿದ ಯುವಕನ ಮೇಲೆ ನಾಲ್ವರ ಗುಂಪು ಅಟ್ಯಾಕ್ ಮಾಡಿ ಡ್ರಾಗನ್ ನಿಂದ ಇರಿದ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ಯುವಕ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಭಂಧ ನಾಲ್ವರ ವಿರುದ್ದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹದೇವಪುರದ ರವಿ ಗಾಯಗೊಂಡ ಯುವಕ. ಪ್ರಶಾಂತ್,ನಾಗ,ಸುದೀಪ್,ಕಿರಣ್ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಾಗಿದೆ.
ಗಣಪತಿ ಮೆರವಣಿಗೆ ಸಾಗುತ್ತಿದ್ದಾಗ ರವಿ ತನ್ನ ಮನೆ ಮುಂದೆ ನಿಂತಿದ್ದ. ಈ ವೇಳೆ ಡ್ಯಾನ್ಸ್ ಮಾಡುವಂತೆ ಕಿರಣ್,ನಾಗ,ಸುದೀಪ್, ಕಿರಣ್ ಆಹ್ವಾನಿಸಿದ್ದಾರೆ. ಇದಕ್ಕೆ ರವಿ ನಿರಾಕರಿಸಿದ್ದಾನೆ. ಇಷ್ಟಕ್ಕೆ ರವಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ತಂದೆ ತಾಯಿ ನೆರವಿನಿಂದ ರವಿ ಬಚಾವ್ ಆಗಿದ್ದಾನೆ. ನಂತರ ಔಷಧಿ ತರಲೆಂದು ಮನೆಯಿಂದ ಹೊರಬಂದಾಗ ಹೊಂಚು ಹಾಕಿದ ನಾಲ್ವರ ಗುಂಪು ಮತ್ತೆ ಸುತ್ತುವರೆದು ದಾಳಿ ಮಾಡಿದ್ದಾರೆ.
ನಮ್ಮ ಮಾತು ಕೇಳುತ್ತಿಲ್ಲ ಇವನನ್ನ ಮುಗಿಸಿದ್ರೆ ಇಡೀ ಏರಿಯಾಗೆ ನಮ್ಮ ತಾಕತ್ತು ಗೊತ್ತಾಗುತ್ತೆ ಎಂದು ಹೇಳುತ್ತಾ ಡ್ರಾಗನ್ ನಿಂದ ಇರಿದಿದ್ದಾರೆ. ಈ ವೇಳೆ ರವಿ ಸ್ನೇಹಿತರು ಮಧ್ಯ ಪ್ರವೇಶಿಸಿ ರವಿಯನ್ನ ಬಿಡಿಸಿಕೊಂಡಿದ್ದಾರೆ. ತೀವ್ರ ಗಾಯಗೊಂಡ ರವಿಯನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.

