ಮೈಸೂರು: ಮೈಸೂರು ಕೇಂದ್ರ ರೈಲ್ವೆ ವರ್ಕ್ ಷಾಪ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ನಾಲ್ವರು ಹಿರಿಯ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ. ನೊಂದ ಮಹಿಳಾ ಸಿಬ್ಬಂದಿ ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಅಧಿಕಾರಿ ಬಿಹಾರದಿಂದ ಹುಡುಗರನ್ನ ಕರೆಸಿ ಶೂಟ್ ಮಾಡಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ.

ಎಸಿ ಮೆಕ್ಯಾನಿಕಲ್ ಶಾಪ್ ನ ಸೀನಿಯರ್ ಸೆಕ್ಷನ್ ಇಂಜಿನಿಯರ್ ಜೆಡ್ ಥಾಮಸ್, ಸೀನಿಯರ್ ಸೆಕ್ಷನ್ ಇಂಜಿನಿಯರ್ ಗೀತೇಶ್ ಸಿಂಗ್, ಸೀನಿಯರ್ ಸೆಕ್ಷನ್ ಇಂಜಿನಿಯರ್ ಸುಜಿತ್ ಹಾಗೂ ಪ್ರತಿಭಾ ಚೌಹಾಣ್ ಎಂಬುವರ ವಿರುದ್ದ ಎಫ್.ಐ.ಆರ್.ದಾಖಲಾಗಿದೆ. ನೊಂದ ಮಹಿಳಾ ಸಿಬ್ಬಂದಿ ಕೆಲಸ ಮಾಡುವ ವೇಳೆ ಜೆಡ್ ಥಾಮಸ್ ರವರು ಲೈಂಗಿಕವಾಗಿ ಮಾತನಾಡುವುದು, ಲೈಂಗಿಕ ಚಿತ್ರ ಬಿಡಿಸಿ ತೋರಿಸುವುದು, ಕೈಯಲ್ಲಿ ಕೆಟ್ಟದಾಗಿ ಸನ್ನೆ ಮಾಡಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ.

ಈ ಬಗ್ಗೆ ಮಹಿಳಾ ಸಿಬ್ಬಂದಿ ಆಂತರಿಕ ಸಮಿತಿಗೆ ದೂರು ನೀಡಿದ್ದಾರೆ.ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಜೆಡ್ ಥಾಮಸ್ ಬೇರೆ ವಿಭಾಗಕ್ಕೆ ವರ್ಗಾವಣೆ ಆದನಂತರ ಗೀತೇಶ್ ಸಿಂಗ್ ಹಾಗೂ ಸುಜಿತ್ ರವರು ಕೆಲಸ ಮಾಡುವಾಗ ಫೋಟೋ ಹಾಗೂ ವಿಡಿಯೋ ತೆಗೆದಿದ್ದಾರೆ. ಇದಕ್ಕೆ ಸೀನಿಯರ್ ಸೆಕ್ಷನ್ ಇಂಜಿನಿಯರ್ ಪ್ರತಿಭಾ ಚೌಹಾಣ್ ಬೆಂಬಲ ನೀಡಿರುವುದಾಗಿ ನೊಂದ ಸಿಬ್ಬಂದಿ ಆರೋಪಿಸಿದ್ದಾರೆ.

ಮೂವರು ಸೇರಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಕೆಲಸ ಮಾಡಲು ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಗೀತೇಶ್ ಸಿಂಗ್ ರವರು ಬಿಹಾರದಿಂದ ಹುಡುಗರನ್ನ ಕರೆಸಿ ಸಾಕ್ಷಿ ಇಲ್ಲದಂತೆ ಶೂಟ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಾಲ್ವರು ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಕಾನೂನು ಕ್ರಮ ಜರುಗಿಸುವಂತೆ ಎಫ್.ಐ.ಆರ್.ನಲ್ಲಿ ಉಲ್ಲೇಖಿಸಲಾಗಿದೆ.