ಮೈಸೂರು: ಕುಶಾಲನಗರ -ಮೈಸೂರು ಚತುಷ್ಪಥ ಹೆದ್ದಾರಿಗೆ ಮಾ. 11ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪ್ರತಾಪ್ ಮಾತನಾಡಿದರು.
ಮಾ.11ರಂದು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಅದೇ ಸಂದರ್ಭ ಮೈಸೂರು ಕುಶಾಲ ನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವರು ಎಂದು ವಿವರಿಸಿದರು. ಬೆಂಗಳೂರು ಮೈಸೂರು ದಶಪಥ ಹೆದ್ದಾರಿಗೆ ಕಾವೇರಿ ಎಕ್ಸ್ ಪ್ರೆಸ್ ವೇ ಹೆಸರು ಇರಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಕಾವೇರಿ ಕೊಡಗಿನ ಕುಲದೇವಿಯಾಗಿದ್ದು, ಮೈಸೂರು ಮಂಡ್ಯ ರಾಮನಗರ ಬೆಂಗಳೂರಿಗೂ ಕುಡಿಯುವ ನೀರು ನೀಡಿದ ಜೀವನದಿಯಾಗಿದೆ. ಈ ಕಾರಣದಿಂದ ಕಾವೇರಿ ಹೆಸರನ್ನೇ ದಶಪಥ ಹೆದ್ದಾರಿಗೆ ಇಡುವಂತೆ ಸಂಸದ ಮತ್ತೊಮ್ಮೆ ಒತ್ತಾಯಿಸಿದರು. ಅಲ್ಲದೆ ಕಾವೇರಿ ಹೆಸರು ಅಂತಿಮ ಮಾಡಲು ಯಾರು ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು.
ಗುಣಮಟ್ಟದ ಕುಶಾಲನಗರ ರಸ್ತೆ, ಸಂಸದ ಭರವಸೆ: ಮೈಸೂರು ಕುಶಾಲ ನಗರ ಚತುಷ್ಪಥ ಹೆದ್ದಾರಿ ಕೂಡ ಅತ್ಯುತ್ತಮ ಗುಣಮಟ್ಟದಲ್ಲಿ ಆಗಲಿದೆ. ಕೊಡಗು ಮತ್ತು ಮೈಸೂರು ಪ್ರವಾಸೋದ್ಯಮಕ್ಕೆ ಈ ಹೆದ್ದಾರಿ ವರದಾನವಾಗಲಿದೆ ಎಂದು ಭರವಸೆ ನೀಡಿದರು.