ಮೈಸೂರು: ರೌಡಿ ಶೀಟ್ ಕ್ಲೋಸ್ ಮಾಡುವಂತೆ ಒತ್ತಾಯಿಸಿ ರೌಡಿಶೀಟರ್ ಒಬ್ಬ ವಿಜಯನಗರ ಪೊಲೀಸ್ ಠಾಣೆಯಲ್ಲೇ ಡೀಸೆಲ್ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಬೋಗಾದಿ ನಿವಾಸಿ ಸ್ವಾಮಿ.ಎಸ್. ಪೊಲೀಸರ ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೌಡಿಶೀಟರ್. ಈತನ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೆಲವು ಪ್ರಕರಣಗಳಿದ್ದ ಕಾರಣ ರೌಡಿಶೀಟ್ ಓಪನ್ ಮಾಡಲಾಗಿದೆ.

ಮುಂಬರುವ ಗಣೇಶ ಹಬ್ಬ ಹಾಗೂ ದಸರಾ ಹಿನ್ನಲೆ ರೌಡಿಶೀಟರ್ ಗಳಿಂದ ಮುಚ್ಚಳಿಕೆ ಬರೆಸಿಕೊಳ್ಳುವ ನಿಯಮಗಳಿದ್ದು ಇದರಂತೆ ಪೊಲೀಸರು ಈತನ ಮನೆಗೆ ತೆರಳಿದ್ದಾರೆ. ಇದನ್ನೇ ನೆಪಮಾಡಿಕೊಂಡ ಸ್ವಾಮಿ ಡೀಸೆಲ್ ಸಮೇತ ವಿಜಯನಗರ ಪೊಲೀಸ್ ಠಾಣೆಗೆ ಬಂದು ಪೊಲೀಸರ ಮುಂದೆ ಮೈಮೇಲೆ ಸುರಿದುಕೊಂಡು ತನ್ನ ಮೇಲಿರುವ ರೌಡಿಶೀಟ್ ಕ್ಲೋಸ್ ಮಾಡಬೇಕೆಂದು ಒತ್ತಾಯಿಸಿದ್ದಾನೆ.

ಕೂಡಲೇ ಸಿಬ್ಬಂದಿಗಳು ಆತ್ಮಹತ್ಯೆ ಯತ್ನವನ್ನ ತಡೆದಿದ್ದಾರೆ.ಹೀಗೆ ವರ್ತಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ರೌಡಿಶೀಟರ್ ಸ್ವಾಮಿ ವಿರುದ್ದ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.