ನಂಜನಗೂಡು: ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಚೆಸ್ಕಾಂ ಅಧಿಕಾರಿಗಳು ಮತ್ತು ನೌಕರರು ಪ್ರತಿಭಟನೆ ನಡೆಸಿದರು.
ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಯ ಮುಂದೆ ಜಮಾಯಿಸಿದ ಚೆಸ್ಕಾಂ ಅಧಿಕಾರಿಗಳು ಹಾಗೂ ನೌಕರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕೆಪಿಟಿಸಿಎಲ್ ಹಾಗೂ ಎಲ್ಲಾ ಎಸ್ಕಾಂ ಗಳ ಅಧಿಕಾರಿಗಳು ಹಾಗೂ ನೌಕರರಿಂದ ಅನಿರ್ದಿಷ್ಟ ಅವಧಿ ಮುಷ್ಕರವನ್ನು ಮಾಡಲಾಗುತ್ತಿದೆ.
ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ವೇತನ ಪರಿಷ್ಕರಣೆ ಜಾರಿಗೊಳಿಸುವಂತೆ ಆಗ್ರಹಿಸಿ ಅನಿರ್ದಿಷ್ಟವಾದಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ನೌಕರರು ತಿಳಿಸಿದರು.
ಚೆಸ್ಕಾಂನ ಕೇಂದ್ರ ಕಾರ್ಯ ಸಮಿತಿ ಸದಸ್ಯ ಮಾದೇಶ್ ಮಾತನಾಡಿ, ಅಧಿಕಾರಿಗಳು ಮತ್ತು ನೌಕರರ ವೇತನ ಪರಿಷ್ಕರಣೆ ಮಾಡಬೇಕು ದಿನಾಂಕ 1-04-2022 ರಿಂದ ಜಾರಿಗೆ ಬರುವಂತೆ ಆದೇಶವನ್ನು ಮಾಡಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದಲ್ಲಿ ಮಾರ್ಚ್ 16 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆಯನ್ನು ಮುಂದುವರಿಸಲಾಗುವುದು. ಹಾಗೂ ವಿದ್ಯುತ್ತನ್ನು ಒಂದು ಗಂಟೆಗಳ ಕಾಲ ಸ್ಥಗಿತ ಮಾಡುತ್ತೇವೆ. ಇದಕ್ಕೆ ನೇರ ಸರ್ಕಾರವೇ ಹೊಣೆಯಾಗುತ್ತದೆ ಆದ್ದರಿಂದ ಸಾರ್ವಜನಿಕರು ಹಾಗೂ ಗ್ರಾಹಕರು ನಮ್ಮನ್ನು ದೂರ ಬೇಡಿ. ನೌಕರರು ವಿದ್ಯುತ್ ಮಧ್ಯದಲ್ಲಿ ಜೀವವನ್ನು ತೊರೆದು ಕೆಲಸ ಮಾಡುತ್ತಾರೆ. ಎಷ್ಟೋ ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ವರ್ಷಕ್ಕೆ 500 ರಿಂದ 600 ಜನ ನಮ್ಮ ನೌಕರರು ಮೃತಪಟ್ಟಿದ್ದಾರೆ. ನಮ್ಮ ಅಗ್ರಿಮೆಂಟ್ ಏನಾಗಿದೆ ಅದರಂತೆ ನಮಗೆ ವೇತನವನ್ನು ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಚೆಸ್ಕಾಂ ಗುತ್ತಿಗೆದಾರ ಶಿವಣ್ಣ, ಮಹದೇವಸ್ವಾಮಿ, ರಘುಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್ ಕುಮಾರ್, ಲೆಕ್ಕಾಧಿಕಾರಿ ಪುಟ್ಟ ಮಾದಯ್ಯ, ಗುರುಮಲ್ಲೇಶ್ ಸೇರಿದಂತೆ ಚೆಸ್ಕಾಂ ನೌಕರರು ಭಾಗವಹಿಸಿದರು.