ಮೈಸೂರು: ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ಮಾ.22 ರಿಂದ 27ರವರೆಗೆ ರಂಗಾಯಣದ ಕಿರು ರಂಗಮಂದಿರದಲ್ಲಿ ಮೈಸೂರು ರಂಗಹಬ್ಬ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಸುರೇಶ್ಬಾಬು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಮೈಸೂರಿನ ಹವ್ಯಾಸಿ ತಂಡಗಳಿಂದ ನಾಟಕಗಳ ಪ್ರದರ್ಶನ, ವಿಚಾರ ಸಂಕಿರಣ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ನಡೆಯಲಿವೆ.
ಉದ್ಘಾಟನಾ ಸಮಾರಂಭವನ್ನು ಮಾ.22ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ರಂಗಕರ್ಮಿ ಪ್ರಸನ್ನ ನೆರವೇರಿಸಲಿದ್ದು, ಮುಖ್ಯ ಅಥಿತಿಗಳಾಗಿ ರಂಗಭೂಮಿ ಮತ್ತು ಚಲನಚಿತ್ರ ನಟರು ಮಂಡ್ಯ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಭಾಗವಹಿಸಲಿದ್ದಾರೆ. ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಮೈಸೂರು ಹವ್ಯಾಸಿ ರಂಗಕಲಾವಿದರು ಭಾಗವಹಿಸಲಿದ್ದಾರೆ ಎಂದರು.
ಮಾ.26ರ ಬೆಳಗ್ಗೆ 10.30ಕ್ಕೆ ಹವ್ಯಾಸಿ ರಂಗಭೂಮಿ-ನೆನ್ನೆ, ಇಂದು, ನಾಳೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಹಿರಿಯ ರಂಗ ನಿರ್ದೇಶಕ ಎಚ್.ಎಸ್.ಉಮೇಶ್ ಹಾಗೂ ನಾಟಕಕಾರ ಹೊರೆಯಾಲ ದೊರೆಸ್ವಾಮಿ ವಿಚಾರ ಮಂಡನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ವಹಿಸಲಿದ್ದಾರೆ. ವಿಚಾರ ಸಂಕಿರಣದ ನಿರೂಪಣೆಯನ್ನು ಮಾಧವ್ ನಿರ್ವಹಿಸಲಿದ್ದಾರೆ ಎಂದರು.
ಮಾ.22ರಂದು ಸೇತು ಮಾಧವನ ಸಲ್ಲಾಪ, 23ರಂದು ಅರಣ್ಯಕಾಂಡ, 24ರಂದು ನಮ್ಮ ನಿಮ್ಮೊಳಗೊಬ್ಬ, 25ರಂದು ಸಂಬಂಜ ಅನ್ನೋದು ದೊಡ್ಡದು ಕನಾ, 26ರಂದು ವಾರಸುದಾರ, 27ರಂದು ಬೇಕಾಗಿದ್ದಾರೆ ಎಂಬ ನಾಟಕ ಪ್ರದರ್ಶನಗೊಳ್ಳಲಿವೆ. 27ರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಿ.ಬಸವಲಿಂಗಯ್ಯ, ರಾಮೇಶ್ವರಿ ವರ್ಮ, ಇಂದಿರಾ ನಾಯರ್, ಎಂ.ಡಿ.ಸುದರ್ಶನ್, ರಾಜೇಶ್ ರಂಗವಲ್ಲಿ ಹಾಜರಿರುವರೆಂದರು.
ಗೋಷ್ಠಿಯಲ್ಲಿ ದೀಪಕ್ ಮೈಸೂರು, ಡಾ.ಕುಮಾರಸ್ವಾಮಿ, ಸುಬ್ಬನರಸಿಂಹ ಹಾಜರಿದ್ದರು.