ಮೈಸೂರು: ನಾವು ಯಾವುದೇ ಸುಳ್ಳು ಭರವಸೆಗಳನ್ನು ನೀಡಿಲ್ಲ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ಬದ್ಧವಾಗಿದೆ. ಇದಕ್ಕೆ ಯಾರ ಗಡುವೂ ಬೇಕಿಲ್ಲ. ಅವರು ನೀಡಿರುವ ಗಡುವಿಗಿಂತ ಮೊದಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಶಾಸಕ ಕೆ.ಹರೀಶ್ಗೌಡ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.
ಮಾವಿನ ಮೇಳ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸಂಸದ ಪ್ರತಾಪಸಿಂಹ ಗ್ಯಾರಂಟಿ ಯೋಜನೆಗಳ ಜಾರಿಗೆ ಜೂ.1ರ ಗಡುವು ನೀಡಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ಸುಳ್ಳು ಭರವಸೆಗಳನ್ನು ನೀಡಿಲ್ಲ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ಬದ್ಧವಾಗಿದೆ. ಇದಕ್ಕೆ ಯಾರ ಗಡುವೂ ಬೇಕಿಲ್ಲ. ಅವರು ನೀಡಿರುವ ಗಡುವಿಗಿಂತ ಮೊದಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ. ಕೇವಲ ಕೋಮು ದ್ವೇಷ ಕೆರಳಿಸುವ ಕೆಲಸ ಮಾಡಿದರು. ಕಾಂಗ್ರೆಸ್ ಅಭಿವೃದ್ಧಿ ಪರವಾಗಿದ್ದು, ಅಭಿವೃದ್ದಿ ಯೋಜನೆಗಳಿಗೆ ರಾಜಕೀಯ ಮಾಡದೆ ಸಹಕಾರ ನೀಡುತ್ತೇವೆ. ಪ್ರತಾಪಸಿಂಹ ಅವರು ಮೊದಲು ಮೋದಿ ಅವರಿಂದ ಎಲ್ಲರ ಖಾತೆಗೂ 15 ಲಕ್ಷ ಹಾಕಿಸಲಿ. ರಾಜ್ಯಕ್ಕೆ ಬರಬೇಕಿರುವ ಅನುದಾನ ತರಲಿ ಎಂದು ತಿರುಗೇಟು ನೀಡಿದರು.
ಮಾಜಿ ಸಚಿವ ಡಾ.ಅಶ್ವಥ್ನಾರಾಯಣ್ ವಿರುದ್ಧ ಎಫ್ಐಆರ್ ದಾಖಲಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಯಾವುದೇ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಪೊಲೀಸರು ಇಷ್ಟು ದಿನ ಮಲಗಿದ್ದರು. ಈಗ ಅವರನ್ನು ಎಬ್ಬಿಸಿದ್ದೇವೆ. ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿಕೆ ನೀಡಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಈಗ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಿದ್ದೇವೆ ಎಂದ ಅವರು, ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ರುದ್ರೇಶ್, ಹಿರಿಯ ಸಹಾಯಕ ನಿರ್ದೇಶಕ ಶಶಿಧರ್, ಸಹಾಯಕ ನಿರ್ದೇಶಕರಾದ ಅಶ್ವಿನಿ, ಶಬೀನಾ ಸೇರಿದಂತೆ ಹಲವರು ಭಾಗವಹಿಸಿದ್ದರು.