ತಿ.ನರಸೀಪುರ: ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಅವರ ಪತ್ನಿ ಶೈಲಜಾ ಚುನಾವಣಾ ಪ್ರಚಾರ ನಡೆಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವರುಣಾ ಕ್ಷೇತ್ರದ ಅಭ್ಯರ್ಥಿ ಮತ್ತು ತಮ್ಮ ಪತಿ ವಿ.ಸೋಮಣ್ಣ ಪರ ಅವರ ಪತ್ನಿ ಶೈಲಜಾ ಚುನಾವಣೆ ಪ್ರಚಾರ ನಡೆಸಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿಯಲ್ಲಿ ಸೋಮಣ್ಣ ಸಾಮಾನ್ಯ ವ್ಯಕ್ತಿಯಲ್ಲ, ಅತ್ಯಂತ ಪ್ರಭಾವಿ ವ್ಯಕ್ತಿ.ಹಾಗಾಗಿ ಅವರನ್ನು ಸಿದ್ದರಾಮಯ್ಯರ ವಿರುದ್ಧ ಸ್ಪರ್ಧಿಸವಂತೆ ವರಿಷ್ಠರು ನಿರ್ಧರಿಸಿದ್ದಾರೆ. ಅಲ್ಲದೆ ಅವರು ಸಚಿವರಾಗಿ ನಿರ್ವಹಿಸಿದ ಕಾರ್ಯವೈಖರಿಯನ್ನು ವಿಶ್ಲೇಷಿಸಿ ಬಿಜೆಪಿ ಹೈಕಮಾಂಡ್ ವರುಣಾದಲ್ಲಿ ಅವರನ್ನು ಕಣಕ್ಕಿಳಿಸಿದೆ ಎಂದರು.
ವರುಣಾ ಕ್ಷೇತ್ರ ಸೋಮಣ್ಣರವರಿಗೆ ಕ್ಷೇತ್ರ ಹೊಸದಲ್ಲ. ಚಾಮರಾಜ ನಗರ ಉಸ್ತುವಾರಿ ಸಚಿರಾಗಿದ್ದ ವೇಳೆ ವರುಣಾ ಕ್ಷೇತ್ರದ ಒಡನಾಟ ಹೆಚ್ಚಿದ್ದು ,ಈಗ ತಮ್ಮ ಆಶೀರ್ವಾದ ಪಡೆಯಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಬಿಜೆಪಿ ಪಕ್ಷ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಬಿಜೆಪಿ ಪಕ್ಷದ ಪರವಾಗಿ ಮತ ಚಲಾಯಿಸಬೇಕಾಗಿ ಮನವಿ ಮಾಡಿದರು.
ಬಿಜೆಪಿ ಮುಖಂಡ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ವರುಣಾ ಕ್ಷೇತ್ರದ ಜನರಿಗೆ ಇದೊಂದು ಸುವರ್ಣಾವಕಾಶ. ವರುಣಾ ಕ್ಷೇತ್ರದಿಂದ ಸೋಮಣ್ಣರನ್ನು ಜನತೆ ಗೆಲ್ಲಿಸಿದರೆ ಅವರು ಬಿಜೆಪಿ ಪಕ್ಷದ ವತಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ.ಹಾಗಾಗಿ ವರುಣಾ ಕ್ಷೇತ್ರದ ಎಲ್ಲ ಜನಾಂಗದ ಜನತೆ ಸೋಮಣ್ಣರನ್ನು ಗೆಲ್ಲಿಸುವ ಮನಸ್ಸು ಮಾಡಬೇಕು ಎಂದರು.
ಸಭೆಯಲ್ಲಿ ಜಿಪಂ ಸದಸ್ಯ ಮಮತ ಶಿವಪ್ರಸಾದ್, ಚಲನಚಿತ್ರ ನಟಿ ಐಶ್ವರ್ಯ, ಟೌನ್ ಅಧ್ಯಕ್ಷ ಕಿರಣ್, ಹಳವರಹುಂಡಿ ಡಾ.ಸಿದ್ದಪ್ಪ, ಕರೋಹಟ್ಟಿ ಮಹಾದೇವಯ್ಯ, ಡನಾಯಕಪುರ ಮಲ್ಲಣ್ಣ, ಅಂಗಡಿ ಶೇಖರ್, ಮೋಹನ, ಕುರುಬೂರು ಮಂಜು ನಾಥ, ಬಜ್ಜಿನಿಂಗಪ್ಪ, ತಲಕಾಡು ಗುರು ಇತರರು ಹಾಜರಿದ್ದರು.