ಮೈಸೂರು: ಎಸ್.ಸಿ. ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಸತತವಾಗಿ 166 ದಿನಗಳಿಂದ ಬೆಂಗಳೂರಿನಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಗಳಾದ ಶ್ರೀ ಪ್ರಸನನ್ನಾನಂದಪುರಿಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ವರುಣಾ ಕ್ಷೇತ್ರದ ಜನರು ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ನಡೆದ ಧರಣಿ ಸಭೆಯಲ್ಲಿ ರಾಜ್ಯ ವಾಲ್ಮೀಕಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ ಬಸವರಾಜು ಮಾತನಾಡಿ ಶೀಘ್ರವೇ ಸ್ವಾಮೀಜಿಯವರ ಬೇಡಿಕೆಯ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಪ್ರತಿ ತಾಲ್ಲೂಕಿನಿಂದ ಧರಣಿಯಲ್ಲಿ ಭಾಗವಹಿಸಲು ಆಗಮಿಸುವುದಾಗಿ ತಿಳಿಸಿದ ಅವರು, ಈಗಾಗಲೇ ಎಸ್.ಸಿ ಎಸ್.ಟಿ ಜನರಿಗೆ ಉದ್ಯೋಗವಿಲ್ಲದೇ ನಿರುದ್ಯೋಗಿಯಾಗಿದ್ದು, ನಮ್ಮ ಸಮಾಜಕ್ಕೆ ಅನ್ಯಾಯವಾಗಿದ್ದು, ಈ ಸಂಬಂಧ ಸರ್ಕಾರ ಕೂಡಲೇ ಎಸ್.ಸಿ ಎಸ್.ಟಿ ಮೀಸಲಾತಿಯನ್ನು ಹೆಚ್ಚಳ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಡಾ.ಬಿ.ಆರ್.ಅಂಬೇಡ್ಕರ್ರವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ರವರು ಮಾತನಾಡಿ ನಮ್ಮ ತಾತನವರು ಸಂವಿಧಾನ ರಚನೆಯಲ್ಲಿ ಆಗಿರುವ ಮೀಸಲಾತಿಗಳ ಬಗ್ಗೆ ಸರ್ಕಾರ ಕೂಡಲೇ ಚರ್ಚಿಸಿ ಸೂಕ್ತ ಮೀಸಲಾತಿಯನ್ನು ಹೆಚ್ಚಳಗೊಳಿಸಿ ಈ ಸಮುದಾಯಗಳಿಗೆ ಅನುಕೂಲ ಕಲ್ಪಿಸಬೇಕೆಂದು ತಿಳಿಸಿದರಲ್ಲದೇ, ಈ ಮನವಿಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾದಯಾತ್ರೆ ಮೂಲಕ ಧರಣಿ ಸತ್ಯಾಗ್ರಹವನ್ನು ನಡೆಸುವುದಾಗಿ ತಿಳಿಸಿದರು.
ನಿವೃತ್ತ ಅಧಿಕಾರಿ ಮೃತ್ಯುಂಜಯಪ್ಪರವರು ಮಾತನಾಡಿ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ದೇಶಕ್ಕೆ ಮಾದರಿಯಾದದು, ಸ್ವಾಮಿಗಳ ಧರಣಿಯನ್ನು ಗಮನಿಸಿ ಸರ್ಕಾರ ಎಸ್.ಸಿ. ಎಸ್.ಟಿ ಮೀಸಲಾತಿಯಲ್ಲಿ ಸೂಕ್ತ ಹೆಚ್ಚಳವನ್ನು ಮಾಡಬೇಕೆಂದು ತಿಳಿಸಿದರು.
ಧರಣಿಯಲ್ಲಿ ಬೆಳಗಾವಿ ಜಿಲ್ಲೆ ಮಹಿಳಾ ವಾಲ್ಮೀಕಿ ಸ್ವಸಹಾಯ ಸಂಘ, ಬಿಜಾಪುರ, ಹಾಗೂ ಚಾಮರಾಜನಗರ, ಮೈಸೂರು, ಜಿಲ್ಲೆಗಳ ಸ್ವಸಹಾಯ ಸಂಘಗಳ ಸಾವಿರಾರು ಸದಸ್ಯರುಗಳು, ಮುಖಂಡರಾದ ನರಸಿಂಹನಾಯಕ, ಪ್ರಭುಸ್ವಾಮಿ, ರಾಜ್ಯಾದ್ಯಕ್ಷ ದೇವಪ್ಪನಾಯಕ, ನಂಜನಗೂಡು ನಾಗರಾಜು, ರವಿಕುಮಾರ್, ನಂಜನಗೂಡು ತಾಲ್ಲೂಕಿನ ಅಳಗಂಚಿ ಗ್ರಾಮಸ್ಥರು, ಸೇರಿದಂತೆ ಹಲವಾರು ಮುಖಂಡರುಗಳು ಪಾಲ್ಗೊಂಡಿದ್ದರು.