ಮೈಸೂರು: ಅಯೋಧ್ಯೆಯ ಬಾಲರಾಮ (ರಾಮಲಲ್ಲಾ) ಮೂರ್ತಿ ಕೆತ್ತನೆಗೆ ಶಿಲೆಯನ್ನು ಕೊಂಡೊಯ್ದ ಸ್ಥಳವಾದ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗ್ರಾಮದ ಹನುಮಯ್ಯ ಅವರ ಜಮೀನಿಗೆ ತೆರಳಿದ ಮೈಸೂರು ಅರಮನೆ ರಾಜಪುರೋಹಿತ ಪ್ರಹ್ಲಾದ್ ರಾವ್ ಮತ್ತು ತಂಡ ಅಗಮಿಸಿ ಸಂಜೆ 5.40ರ ಗೋಧೂಳಿ ಲಗ್ನದಲ್ಲಿ ವಿಶೇಷ ಕಾರ್ಯಕ್ರಮವನ್ನು ನಡೆಸಿದ್ದಾರೆ.
ಈ ವೇಳೆ ಜಮೀನಿನ ಮಾಲೀಕರಾದ ತಾಲೂಕಿನ ಹಾರೋಹಳ್ಳಿ ಗ್ರಾಮದ ಹನುಮಯ್ಯ ಅವರ ಮಗ ರಾಮದಾಸ್ ಮಾತನಾಡಿ, ಅಯೋಧ್ಯೆಯಲ್ಲಿ ಇದೇ ಜ.22 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ಮೂರ್ತಿ ನಮ್ಮ ಜಮೀನಿನಲ್ಲಿ ದೊರೆತ ಶಿಲೆಯಿಂದ ಕೆತ್ತನೆಯಾಗಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಜಮೀನಿನಲ್ಲಿ ವ್ಯವಸಾಯಕ್ಕೆ ಕಲ್ಲು ಅಡ್ಡಲಾಗಿದ್ದ ಕಾರಣ ಜೆಸಿಬಿ ಯಂತ್ರದಿಂದ ಹೊರ ತೆಗೆಸಿದ್ದೆವು. ಮೊದಲಿಗೆ ಕೊಪ್ಪಳದ ಶಿಲ್ಪಿ ಪ್ರಕಾಶ್ ಅವರು ಬಂದು ಅಂಜನೇಯ ಮೂರ್ತಿ ಕೆತ್ತನೆಗೆ ಪರಿಶೀಲಿಸಿ ತಾವು ಕೆತ್ತನೆ ಮಾಡುವ ಅಂಜನೇಯ ಮೂರ್ತಿಗೆ ಉದ್ದ ಅಗಲ ಸಾಲದು ಎಂದು ಹೇಳಿ ಸ್ಥಳದಲ್ಲೇ ಒಂದು ಸಣ್ಣ ಗಾತ್ರದ ಅಂಜನೇಯ ಮೂರ್ತಿ ಕೆತ್ತನೆ ಮಾಡಿ ತೆರಳಿದ್ದರು.
ಆ ನಂತರ ಅಯೋಧ್ಯೆಗೆ ಬಾಲರಾಮ ಮೂರ್ತಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಶಿಲೆ ಹುಡುಕಾಟ ಮಾಡುತ್ತಿರುವ ವಿಷಯ ಮತ್ತೋರ್ವ ಶಿಲ್ಪಿಗಳಾದ ಸುರೇಂದ್ರ ಅವರಿಗೆ ತಿಳಿದಿತ್ತು, ಅವರು ಶಿಲ್ಪಿ ಅರುಣ್ ಅವರಿಗೆ ಶಿಲೆ ತೋರಿಸಿದ ನಂತರ ಅಯೋಧ್ಯೆ ಟ್ರಸ್ಟ್ ನ ಗರುಗಳಿಗೆ ತಿಳಿಸಲಾಗಿ ಅವರು ಕೂಡ ಬಂದು ಪರಿಶೀಲಿಸಿ ಇದು ಅಪರೂಪದ ಕೃಷ್ಣ ಶಿಲೆ ಎಂದು ಸಂತಸ ವ್ಯಕ್ತಪಡಿಸಿದ್ದರು.
ಈಗ ನಮ್ಮ ಜಮೀನಿನಲ್ಲಿ ದೊರೆತ ಕೃಷ್ಣಶೀಲೆಯಿಂದಲೇ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ (ಬಾಲರಾಮ) ಮೂರ್ತಿಯೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದು ನಮ್ಮಗಳ ಸಂತಸ ಇಮ್ಮಡಿಗೊಳಿಸಿದ್ದು, ಶ್ರೀರಾಮನೇ ನಮ್ಮ ಜಮೀನಿನಲ್ಲಿದ್ದ ಎನ್ನುವ ಭಾವನೆ ನಮ್ಮ ಕುಟುಂಬ ಸೇರಿದಂತೆ ಸುತ್ತ ಮುತ್ತಲ ಗ್ರಾಮದ ಜನರಲ್ಲಿ ಮೂಡಿದ್ದು ಪ್ರತಿನಿತ್ಯ ನೂರಾರು ಜನರು ಬಂದು ಶಿಲೆ ಸಿಕ್ಕ ಸ್ಥಳಕ್ಕೆ ನಮಸ್ಕಾರ ಮಾಡಿ ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಗಣಿ ಗುತ್ತಿಗೆದಾರ ಗುಜ್ಜೇಗೌಡನಪುರ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದ ವಿಷಯ ತಿಳಿದು ಗುಜ್ಜೇಗೌಡನಪುರ, ಹಾರೋಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ರಾಮ ಭಕ್ತರು ಪಾಲ್ಗೊಂಡಿದ್ದರು.
ಈ ಸಂದರ್ಭ ರಾಮದೇವರ ಪೋಟೋಗೆ ವಿಶೇಷ ಅಲಂಕಾರ ಮಾಡಿ ಹೋಮ, ರಾಮ ಭಜನೆ ಸೇರಿದಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೂಜಾ ಕಾರ್ಯಗಳು ನೆರವೇರಿದವು. ಪೂಜಾ ಸಮಯದಲ್ಲಿ ಸೇರಿದ್ದ ರಾಮಭಕ್ತರು ಜೈ ಶ್ರೀರಾಮ್ ಜಯ ಘೋಷಣೆ ಕೂಗಿ ಸಂಭ್ರಮಿಸಿದರು. ಪೂಜಾ ಕಾರ್ಯಕ್ರಮ ಮುಗಿದ ಬಳಿಕ ನೇರದಿದ್ದ ರಾಮ ಭಕ್ತರಿಗೆ ಪಾನಕ, ಮಜ್ಜಿಗೆ, ಸಿಹಿ ವಿತರಿಸಲಾಯಿತು.
ಈ ಸಂದರ್ಭ ಜಮೀನಿನ ಮಾಲೀಕ ರಾಮದಾಸ್ ಅವರ ಮಗ ರವಿಕುಮಾರ್, ಗಣಿ ಗುತ್ತಿಗೆದಾರ ಶ್ರೀನಿವಾಸ್, ಮುಖಂಡರಾದ ಚನ್ನಕೇಶವ, ಮಧುಕೇಶವಗೌಡ, ವೆಂಕಟೇಶ್ ಸೇರಿದಂತೆ ನೂರಾರು ರಾಮ ಭಕ್ತರು ಇದ್ದರು.