ಮೈಸೂರು: ಅಯೋಧ್ಯೆಯ ಶ್ರೀರಾಮಮಂದಿರದ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬಸವೇಶ್ವರ ವೃತ್ತದಲ್ಲಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರ ನಿವಾಸ ಕಶ್ಯಪ ಕಲಾನಿಕೇತನದಲ್ಲಿ ಸಂಭ್ರಮ ಮನೆ ಮಾಡಿದ್ದು, ಜನ ಆಗಮಿಸಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಅರುಣ್ ಕುಟುಂಬದ ಸದಸ್ಯರಾದ ತಾಯಿ ಸರಸ್ವತಿ, ಪತ್ನಿ ವಿಜೇತಾ, ಮಕ್ಕಳಾದ ಸಾನ್ವಿ, ವೇದಾಂತ್, ಸಹೋದರ ಸೂರ್ಯಪ್ರಕಾಶ್ ಸೇರಿದಂತೆ ಸಂಬಂಧಿಗಳು ರಾಮನ ಪೂಜೆಯಲ್ಲಿ ಪಾಲ್ಗೊಂಡರು. ಸೂರ್ಯಪ್ರಕಾಶ್ ಅವರು ಮನೆಯ ಎದುರು ಸ್ಥಾಪಿಸಲಾಗಿದ್ದ ಶ್ರೀರಾಮನ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಬೆಳಗಿದರು. ರಾಮನ ಜಯಘೋಷ ಮೊಳಗಿತು.
ತಾಯಿ ಸರಸ್ವತಿ ಅವರು ಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಿಹಿ ಹಂಚಿದರು.
ಈ ವೇಳೆ ಮಾತನಾಡಿದ ಸೂರ್ಯಪ್ರಕಾಶ್, ತಮ್ಮ ಅರುಣ್ ಕೆತ್ತಿದ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ನಡೆಯುತ್ತಿದೆ. ತಾತ ಬಸವಣ್ಣ ಶಿಲ್ಪಿ, ಅಜ್ಜಿ ಪುಟ್ಟಮ್ಮ, ತಂದೆ ಯೋಗಿರಾಜ್ ಶಿಲ್ಪಿ, ತಾಯಿ ಸರಸ್ವತಿ ಅವರ ಕೃಪಾಶೀರ್ವಾದದ ಫಲವಿದು ಎಂದು ಸಂತಸ ವ್ಯಕ್ತಪಡಿಸಿದರು.
ಅರುಣ್ ಅವರ ಶ್ರಮ, ಶ್ರದ್ಧಾಭಕ್ತಿ ಅವನನ್ನು ಈ ಮಟ್ಟಕ್ಕೆ ಬೆಳೆಸಿದೆ. ಬಾಲರಾಮನ ಮೊಗ, ಕಿರೀಟವನ್ನು ನೋಡಿದಾಗ ನನ್ನ ಕಣ್ಗಳು ತುಂಬಿ ಬಂದವು. ಏಪ್ರಿಲ್ನಲ್ಲಿ ಅಯೋಧ್ಯೆಯ ದರ್ಶನದ ಅವಕಾಶ ಸಿಗಲಿದೆ. ಎಲ್ಲರೂ ಹೋಗಿ ನೋಡುತ್ತೇವೆ ಎಂದರು.
ರಾಮಮಯವಾದ ದಿನದಲ್ಲಿ ನಾಡದೇವತೆ ಚಾಮುಂಡೇಶ್ವರಿ ಸ್ಮರಿಸುತ್ತ, ಅರುಣ್ ಕಾರ್ಯಕ್ಕೆ ಅವಕಾಶ ನೀಡಿದ ರಾಮಮಂದಿರ ಟ್ರಸ್ಟ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಧನ್ಯವಾದ ಎಂದರು.
ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ಅಂಗವಾಗಿ ಯಾದವಗಿರಿಯಲ್ಲಿರುವ ಉತ್ತರಾದಿ ಮಠದ ಆಂಜನೇಯ ದೇವಾಲಯದಲ್ಲಿ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಶ್ರೀಮದ್ ಉತ್ತರಾದಿ ಮಠ ವತಿಯಿಂದ ಶ್ರೀರಾಮ ತಾರಕ ಹೋಮ, ಸಾಮೂಹಿಕ ಭಜನೆ, ಹಾಗೂ ಸಾರ್ವಜನಿಕರ ವೀಕ್ಷಣೆಗಾಗಿ ಬೃಹತ್ ಗಾತ್ರದ ಟಿವಿ ಪರದೆಯ ಮೇಲೆ ಪ್ರತಿಷ್ಠಾನ ನೇರ ಪ್ರಸಾರ ಮಾಡಲಾಯಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.