ಸರಗೂರು: ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿಪುರ ಗ್ರಾಮದಲ್ಲಿ ಶ್ರೀ ಕಟ್ಟೆ ಮಾರಮ್ಮನವರ ಜಾತ್ರಾ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ಜರುಗಿತು.
ದೇವರ ಮುಖವಾಡ ಒಡವೆ ವಸ್ತ್ರ ಹೂಗಳಿಂದ ಅಲಂಕರಿಸಿ, ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಇಲ್ಲಿನ ಶ್ರೀ ಮಠದ ಮಠಾಧ್ಯಕ್ಷರಾದ ಚನ್ನಬಸವ ಸ್ವಾಮೀಜಿ, ಕಿರಿಯ ಸ್ವಾಮೀಜಿಗಳಾದ ತೋಂಟದಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಕಟ್ಟೆ ಮಾರಮ್ಮನವರ ಬಸವನ ಮೆರವಣಿಗೆ ಮುಖಾಂತರ ಛತ್ರಿ ಛಾಮರ, ಮಂಗಳವಾದ್ಯ, ವೀರಗಾಸೆ, ನಂದಿಧ್ವಜ, ತಮಟೆ, ಡಮರುಗಗಳು ಸಂಭ್ರಮಿಸಿದವು. ಇಲ್ಲಿನ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮೂಲಕ ಹೊರಟು, ಈ ಸಂದರ್ಭದಲ್ಲಿ ಭಕ್ತಾಧಿಗಳು ದಾರಿಯುದ್ದಕ್ಕೂ ಮಜ್ಜಿಗೆ, ಶರಬತ್ತು, ಕೋಸಂಬರಿ, ಇನ್ನಿತರ ಸಿಹಿ ತಿಂಡಿಗಳನ್ನು ಹಂಚುವ ಮೂಲಕ ನೆರವೇರಿತು.
ಮೆರವಣಿಗೆಯ ಉದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ನಂತರ ಸಂಜೆ ವೇಳೆಯಲ್ಲಿ ಹಂಚಿಪುರ ಗ್ರಾಮದ ಎಲ್ಲಾ ಮನೆಯ ಮಹಿಳೆಯರು, ಹೆಣ್ಣುಮಕ್ಕಳು ಸಾವಿರಾರು ಗಟ್ಟಲೆಯಲ್ಲಿ ಸೇರಿ ತಂಪನ್ನು ಹೊತ್ತಿ ಮೆರವಣಿಗೆ ಮೂಲಕ ಶ್ರೀ ಕಟ್ಟೆ ಮಾರಮ್ಮನವರ ದೇವಸ್ಥಾನದ ಹತ್ತಿರ ಹೋಗಿ ಸರತಿ ಸಾಲಿನಲ್ಲಿ ನಿಂತು ದೇವಿಗೆ ಪೂಜೆ ಸಲ್ಲಿಸುವ ಮೂಲಕ ದರ್ಶನ ಪಡೆದರು, ಉತ್ಸವವು ಕೊನೆಗೊಂಡಿತು.
ಹಂಚಿಪುರ ಗ್ರಾಮದ ಯಜಮಾನರಾದ ಗುರುಸಿದ್ದಪ್ಪ(ಪುಟ್ಟಣ್ಣ), ಶಿವಪ್ಪ ಅವರ ನೇತೃತ್ವದಲ್ಲಿ ಗ್ರಾಮದ ಎಲ್ಲರ ಸಹಕಾರದಿಂದ ನೆರವೇರಿತು. ಹಂಚಿಪುರದ ಗ್ರಾಮದ ಎಲ್ಲಾ ಮನೆಗಳಲ್ಲಿ ದೂರ ಊರುಗಳಿಂದ ಬಂದ ನೆಂಟರಿಷ್ಟರು ಸಂಬಂಧಿಕರುಗಳು ಅವರವರ ಮನೆಗಳಲ್ಲಿ ಊಟ, ತಿಂಡಿ ತಿನಸು ತಿಂದು ಸಂಭ್ರಮಿಸಿದರು.
ಜಾತ್ರೆ ಹಿನ್ನಲೆಯಲ್ಲಿ ಸಾವಿರಾರು ಭಕ್ತಾಧಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಈ ಜಾತ್ರಾ ಉತ್ಸವಕ್ಕೆ ಸರಗೂರು ತಾಲೂಕಿನ ಅಕ್ಕ ಪಕ್ಕದ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.