ನಂಜನಗೂಡು: ಹಿಟ್ & ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನ ಕಾನೂನು ವಿರೋಧಿಸಿ ನಂಜನಗೂಡಿನಲ್ಲಿ ಇಂದು ಕರ್ನಾಟಕ ರಾಜ್ಯ ಲಾರಿ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನೆನ್ನೆಯಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಲಾರಿ ಚಾಲಕರು ಮುಂದಾಗಿದ್ದು ನಂಜನಗೂಡು ನಗರದ ಎಪಿಎಂಸಿ ಆವರಣದಲ್ಲಿ ಲಾರಿಗಳನ್ನು ನಿಲ್ಲಿಸಿ ಕಾಲ್ನಡಿಗೆ ಮೂಲಕ ನಡೆದುಕೊಂಡು ಬಂದು ಹುಲ್ಲಹಳ್ಳಿ ವೃತ್ತದಲ್ಲಿ ಜಮಾಯಿಸಿದ ಲಾರಿ ಚಾಲಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಲಾರಿ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ನೂತನ ಕಾಯ್ದೆಯನ್ನು ವಿರೋಧಿಸಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ನಂಜನಗೂಡಿನಲ್ಲಿ ನಾವು ಬೆಂಬಲ ವ್ಯಕ್ತಪಡಿಸಿ ಪ್ರತಿಭಟಿಸುತ್ತಿದ್ದೇವೆ. ಹಿಟ್ ಆಂಡ್ ರನ್ ಕೇಸ್ ನಲ್ಲಿ ಆರೋಪಿ ಅಪಘಾತ ಬಗ್ಗೆ ಮಾಹಿತಿ ನೀಡದೇ ಘಟನಾ ಸ್ಥಳದಿಂದ ಪರಾರಿಯಾದರೆ ಹತ್ತು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.
ಈ ಕಾನೂನನ್ನು ವಾಪಸ್ ಪಡೆಯಬೇಕು. ಈ ಕಾಯ್ದೆಯ ಬಗ್ಗೆ ಮಾಹಿತಿ ಪಡೆಯದೆ ಏಕಾಏಕಿ ಕಾಯ್ದೆಯನ್ನು ಮಾಡಿದ್ದಾರೆ. ಈ ಕಾಯ್ದೆಯಿಂದ ಲಾರಿ ಚಾಲಕರು ಬೀದಿಗೆ ಬರುತ್ತಾರೆ. ಹಾಗಾಗಿ ನಮ್ಮಲ್ಲಿರುವ ಡಿಎಲ್ ಗಳನ್ನು ಸರ್ಕಾರಕ್ಕೆ ವಾಪಸ್ ಕೊಡುತ್ತೇವೆ. ಕೂಡಲೆ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ಮುಷ್ಕರ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.