ಮೈಸೂರು: ಈ ಬಾರಿಯ ರಾಜ್ಯ ಬಜೆಟ್ ರೈತ ಪರವಾಗಿರಬೇಕೆಂಬ ನಿಟ್ಟಿನಲ್ಲಿ ಕೃಷಿಯಲ್ಲಿ ಕರ್ನಾಟಕ ಮಾದರಿಗಾಗಿ ರೈತ ಸಮುದಾಯದ ಹಕ್ಕೊತ್ತಾಯಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ರೈತ ಸಂಘ ಸಲ್ಲಿಸಿದೆ ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಹತ್ತು ವರ್ಷಗಳ ಕೃಷಿ ನೀತಿ ಹೇಗಿರಬೇಕು ಎಂಬ ಪರಿಕಲ್ಪನೆಯೊಡನೆ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಹಕ್ಕೊತ್ತಾಯಗಳು ಇವಾಗಿವೆ. ನಮ್ಮ ನಿರೀಕ್ಷೆ ನೂರೆಂಟು ಇರಬಹುದು, ಆದರೆ ರಾಜ್ಯ ಸರ್ಕಾರ ತನ್ನ ಆರ್ಥಿಕ ಇತಿಮಿತಿಯೊಳಗೆ ಕೃಷಿ ಕ್ಷೇತ್ರಕ್ಕೆ ಏನೇನು ಮಾಡಬಹುದು ಎಂಬ ಸಲಹೆ ಇದೆ. ಜತೆಗೆ ಬರಮುಕ್ತ ಕರ್ನಾಟಕವಾಗಿಸಲು ಏನು ಮಾಡಬೇಕೆಂದು ವಿವರಿಸಲಾಗಿದೆ ಎಂದರು.
ಕೃಷಿ ವ್ಯವಸ್ಥೆ ದಿಕ್ಕು ತಪ್ಪಿರುವುದರಿಂದಾಗಿ ರೈತ ಸಮುದಾಯದ ಮೇಲೆ ಹಲವಾರು ಪರಿಣಾಮವುಂಟಾಗುತ್ತಿವೆ. ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಖಿನ್ನತೆ ಕಾಡುತ್ತಿದೆ. ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಹೀಗಾಗಿ ಕೃಷಿ ಲಾಭದಾಯಕವಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದರು.
ಕೃಷಿ ಪಂಪ್ಸೆಟ್ ವಿದ್ಯುತ್ ಸಂಪರ್ಕ ಉಚಿತವಾಗಿರಬೇಕು. ತೋಟದ ಮನೆಯಲ್ಲಿ ಇರುವವರಿಗೆ ಗೃಹ ಬಳಕೆಯ ಅಗತ್ಯವಿರುವಷ್ಟು ವಿದ್ಯುತ್ ಪೂರೈಸಬೇಕು, ಸಣ್ಣ ಕಾಫಿ ಬೆಳೆಗಾರರಿಗೆ ವಿದ್ಯುತ್ ಸಬ್ಸಿಡಿ ಇರಬೇಕು. ಹದ್ದುಬಸ್ತು, ಪೋಡಿ ದುಸ್ತಿ, ಸ್ಕೆಚ್, ಹೌಸಿಂಗ್ ಇ-ಸ್ವತ್ತು ದರ ಮೊದಲಿನಷ್ಟೇ ಇರಬೇಕು. ಬರ ಇರುವ ಕಾರಣದಿಂದ ರೈತರಿಂದ ಬಲಾತ್ಕಾರವಾಗಿ ಸಾಲ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು. 2018ರಲ್ಲಿ ಘೋಷಿಸಿದ ಸಾಲ ಮನ್ನಾ ಪ್ರಯೋಜನ ಎಲ್ಲ ರೈತರಿಗೂ ಸಿಗುವಂತೆ ನೋಡಿಕೊಳ್ಳಬೇಕೆಂದರು.
ಬಿಸಿಯೂಟ, ಅಂಗನವಾಡಿ, ಹಾಸ್ಟೆಲ್, ಜೈಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೊದಲಾದವಕ್ಕೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳು ಮತ್ತು ಸಂಸ್ಕರಿತ ಆಹಾರ ಪದಾರ್ಥಗಳನ್ನು ಕಡ್ಡಾಯವಾಗಿ ರೈತ ಸಹಕಾರಿಗಳು, ನೋಂದಾಯಿತ ಸ್ವಸಹಾಯ ಸಂಘಗಳು, ಎಫ್ಟಿಒ ಮೂಲಕವೇ ಖರೀದಿಸುವ ನಿರ್ಧಾರ ಕೈಗೊಳ್ಳಬೇಕು ಎಂಬಿವೇ ಮೊದಲಾದ ಸಲಹೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನಾಗನಹಳ್ಳಿ ವಿಜೇಂದ್ರ, ಮಂಡಕಳ್ಳಿ ಮಹೇಶ್, ಪಿ. ಮರಂಕಯ್ಯ ಇದ್ದರು.