ಮೈಸೂರು: ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆ ಮೈಸೂರು ನಗರದ ನರಸಿಂಹರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರೆ ಸೇನಾ ಪಡೆಯೊಂದಿಗೆ ಮೈಸೂರು ನಗರ ಪೊಲೀಸರು ಪಥ ಸಂಚಲನ ನಡೆಸಿದರು.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅರೆ ಸೇನಾ ಪಡೆಯ ಯೋಧರು ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲಿದ್ದು, ಸಾರ್ವಜನಿಕರು ಯಾವುದೇ ಆತಂಕ, ಭಯಪಡದೇ ನಿರ್ಭೀತಿಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶ ನೀಡಿದರು. ನರಸಿಂಹ ರಾಜ ಕ್ಷೇತ್ರದ ಕ್ಯಾತಮಾರನಹಳ್ಳಿಯಿಂದ ಆರಂಭಗೊಂಡ ಪಥ ಸಂಚಲನ ಉದಯಗಿರಿ, ಬೀಡಿ ಕಾಲನಿ, ಗಾಯತ್ರಿ ಪುರಂ ಸೇರಿದಂತೆ ಹಲವು ಬಡಾವಣೆಗಳ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಪಥ ಸಂಚನದಲ್ಲಿ ಡಿಸಿಪಿಗಳಾದ ಮುತ್ತುರಾಜು, ಜಾಹ್ನವಿ ಸೇರಿದಂತೆ ಎಸಿಪಿಗಳು, ಇನ್ಸ್ಪೆಕ್ಟರ್ಗಳು ಸೇರಿದಂತೆ ಐನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಈ ನಡುವೆ ಪ್ರಯಾಣಿಕರೋಬ್ಬರು ದಾಖಲೆ ಇಲ್ಲದೇ ಕೆಎಸ್ಆರ್ಟಿಸಿ ಬಸ್ನಲ್ಲಿ ಸಾಗಿಸುತ್ತಿದ್ದ 11.79ಲಕ್ಷ ರೂ. ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ರಮ್ಮನಹಳ್ಳಿ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ಸಾರಿಗೆ ಬಸ್ನಲ್ಲಿದ್ದ ಪ್ರಯಾಣಿಕರ ಲಗೇಜನ್ನು ಸ್ಥಿರ ಕಣ್ಗಾವಲು ತಂಡ ಪರಿಶೀಲಿಸಿದಾಗ 11.79 ಲಕ್ಷ ರೂ. ನಗದು ಪತ್ತೆಯಾಗಿದೆ.
ವಶಕ್ಕೆ ಪಡೆದ ಹಣವನ್ನು ಆದಾಯ ತೆರಿಗೆ ಇಲಾಖೆಯ ವಶಕ್ಕೆ ನೀಡಲಾಗಿದೆ. ಮಂಗಳವಾರ ಬೆಳಗ್ಗೆ 9ಗಂಟೆಯಿಂದ ಬುಧವಾರ ಬೆಳಗ್ಗೆ 9 ಗಂಟೆಯವರೆಗೂ ತಪಾಸಣೆ ಮಾಡಿರುವ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಥಿರ ಕಣ್ಗಾವಲು ತಂಡ ಸುಮಾರು 31,56,300 ಲಕ್ಷ ರೂ. ವಶಕ್ಕೆ ಪಡೆದಿದೆ. ಈ ಪೈಕಿ 11,79,500 ಲಕ್ಷ ರೂ. ರಮ್ಮನಹಳ್ಳಿ ಚೆಕ್ಪೋಸ್ಟ್ನಲ್ಲಿ ಸಿಕ್ಕಿದೆ. ಅಲ್ಲದೇ, 26,320 ರೂ. ಮೌಲ್ಯದ 40 ಕುಕ್ಕರ್, 20 ತಾವ ಮತ್ತು 41,583 ರೂ.ಮೌಲ್ಯದ 70,69 ಲೀ. ಮದ್ಯ ಹಾಗೂ 25 ಸಾವಿರ ರೂ.ಮೌಲ್ಯದ 1 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.