ಮೈಸೂರು: ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳ ಸಿದ್ಧತೆ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಇಂದು ಪರಿಶೀಲನೆ ನಡೆಸಿದರು. ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನಕ್ಕೆ ಸಚಿವ ಎಸ್ . ಟಿ ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್,ಮೇಯರ್ ಸುನಂದಾ ಪಾಲಾನೇತ್ರ, ಮೂಡ ಅಧ್ಯಕ್ಷ ಹೆಚ್ ವಿ ರಾಜೀವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪಲಾನುಭವಿಗಳ ಸಂವಾದ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಸದ್ಯ ಇದೇ ಬೃಹತ್ ವೇದಿಕೆ ಸಿದ್ಧತೆ ವೀಕ್ಷಣೆ ಮಾಡಿದ ಸಚಿವ ಎಸ್ ಟಿ ಸೋಮಶೇಖರ್ ಅಧಿಕಾರಿಗಳಿಂದ ಈಗ ನಡೆಯುತ್ತಿರುವ ಕೆಲಸದ ಮಾಹಿತಿ ಪಡೆದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.21ರಂದು ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ.ಅಂದು ಯೋಗ ಕಾರ್ಯಕ್ರಮ ಮಾತ್ರ ಅಧಿಕೃತ ಆಗಿದೆ.ಅದರ ಜೊತೆಗೆ ಮೂರ್ನಾಲ್ಕು ಕಾರ್ಯಕ್ರಮ ಅಳವಡಿಸಿಕೊಂಡಿದ್ದೇವೆ.ಫಲಾನಿಭವಿಗಳ ಸಂವಾದ ಕಾರ್ಯಕ್ರಮ ನಡೆಸಲು ಚಿಂತಿಸಿದ್ದೇವೆ. ಈ ಸಂಬಂಧ ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ.ಎಷ್ಟು ಜನರನ್ನ ಸೇರಿಸಬೇಕು ಅಂತ ಅಂತಿಮ ತೀರ್ಮಾನ ಮಾಡ್ತೇವೆ.ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿದ್ದೇವೆ ಎಂದರು.
ಇನ್ನು ಯೋಗ ದಿನಾಚರಣೆಗೆ 15 ಸಾವಿರ ಮಂದಿಗೆ ಅವಕಾಶ ನೀಡಲಾಗಿದ್ದು,ರಾಜ್ಯ ಸರ್ಕಾರದ 12 ಸಾವಿರ ಹಾಗೂ ಕೇಂದ್ರ ಸರ್ಕಾರದ 3 ಸಾವಿರ ಮಂದಿ ಭಾಗಿಯಾಗಲಿದ್ದಾರೆ.ಈಗಾಗಲೇ ಆನ್ ಲೈನ್ ನೋಂದಣಿ ಆರಂಭವಾಗಿದೆ.ಜೊತೆಗೆ ಪ್ರಧಾನಿ ಕಾರ್ಯಕ್ರಮಕ್ಕೆ ಯಾವುದೇ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.