ಮೈಸೂರು: ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಅಂಧಕಾಸುರ ಸಂಹಾರ ಆಚರಣೆ ವೇಳೆ ಸಂಪ್ರದಾಯಕ್ಕೆ ಅಡ್ಡಿಪಡಿಸಿ ನಂಜುಂಡೇಶ್ವರನ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದಲ್ಲದೆ, ದೇವರ ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿ ಭಕ್ತರ ಭಾವನೆಗೆ ಧಕ್ಕೆ ತಂದ ಆರೋಪಿಗಳನ್ನು ಬಂಧಿಸದೆ ಇರುವುದನ್ನು ಖಂಡಿಸಿ ಜ.4ರಂದು ನಂಜನಗೂಡು ಬಂದ್ ಗೆ ಕರೆ ನೀಡಲಾಗಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ನಗರಸಭಾ ಸದಸ್ಯ ಕಪಿಲೇಶ್ ಅವರು, ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ಸಂಪ್ರದಾಯದಂತೆ ಅನಾದಿಕಾಲದಿಂದಲೂ ಮಾರ್ಗಶಿರ ಹುಣ್ಣಿಮೆಯ ಸಂದರ್ಭದಲ್ಲಿ ಅಂಧಾಕಾಸುರನ ಸಂಹಾರ ನಡೆಸಲಾಗುತ್ತದೆ. ನಂಜುಂಡೇಶ್ವರನ ದೇವಾಲಯದ ಆಚರಣೆಯ ವಿಧಿವಿಧಾನಗಳನ್ನು ಸರ್ಕಾರದ ಅಧಿಕೃತ ಕಟ್ಟಳೆ ಪುಸ್ತಕವನ್ನು ಆಧರಿಸಿ ಅದರ ಸೂಚನೆಯಂತೆ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದಲೇ ಸಂವಿಧಾನದ ಬದ್ಧವಾಗಿ ನಡೆಸುತ್ತಾ ಬರಲಾಗುತ್ತಿದೆ.
ಅದರಂತೆ ಡಿ.26ರಂದು ಅಂಧಕಾಸುರ ಸಂಹಾರದ ಧಾರ್ಮಿಕ ಆಚರಣೆಯನ್ನು ನಡೆಸಲಾಗಿದ್ದು, ಈ ವೇಳೆ ಕಿಡಿಕೇಡಿಗಳು ಸಂಪ್ರದಾಯಕ್ಕೆ ಅಡ್ಡಿ ಪಡಿಸಿ, ನಂಜುಂಡೇಶ್ವರನ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ನಂಜುಂಡೇಶ್ವರನ ಉತ್ಸವ ವಿಗ್ರಹದ ಮೇಲೆ ಎಂಜಲು ನೀರು ಎರಚಿ ಕೋಟ್ಯಂತರ ಭಕ್ತರ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಘಟನೆ ನಡೆದು 5 ದಿನ ಕಳೆದರು ಕಿಡಿಗೇಡಿಗಳನ್ನು ಬಂಧಿಸದೆ ಕಾಲಹರಣ ಮಾಡುತ್ತಿರುವ ಪೋಲಿಸ್ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರದ ಕ್ರಮವನ್ನು ಖಂಡಿಸಿ ನಂಜುಂಡೇಶ್ವರನ ಭಕ್ತರೆಲ್ಲ ಸೇರಿ ಜನವರಿ 4ರ ಗುರುವಾರ ಸ್ವಯಂ ಪ್ರೇರಿತವಾಗಿ ನಂಜನಗೂಡು ಬಂದ್ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಅನಿವಾರ್ಯತೆ ಬಂದಿದೆ ಎಂದರು.
ಅಂದು ಎಲ್ಲರೂ ನಂಜನಗೂಡು ಪಟ್ಟಣದಲ್ಲಿ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ದಕ್ಷಿಣ ಕಾಶಿಯ ನಂಜುಂಡೇಶ್ವರನಿಗೆ ಎಂಜಲು ಎರಚಿದವರಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸುವಂತೆ ಮನವಿ ಮಾಡಿದ್ದಾರೆ.