ಮೈಸೂರು: ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ ಅದರಲ್ಲೂ ಕಾಂಗ್ರೆಸ್ ನಿಂದ ಅಭ್ಯರ್ಥಿ ಯಾರು ಎಂಬುದೇ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೇ ಕ್ಷೇತ್ರದಲ್ಲಿ ಮೂಲ ಮತ್ತು ವಲಸಿಗ ಕಾಂಗ್ರೆಸ್ ನಾಯಕರ ನಡುವೆ ಫೈಟ್ ಆರಂಭವಾಗಿದ್ದು, ಅದು ಎಲ್ಲಿಗೆ ಬಂದು ನಿಲ್ಲಲಿದೆಯೋ ಗೊತ್ತಿಲ್ಲ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕ್ಷೇತ್ರದಲ್ಲಿ ಮಾಜಿ ಶಾಸಕ ವಾಸು ಮತ್ತು ಹರೀಶ್ ಗೌಡರ ನಡುವೆ ಪೈಪೋಟಿ ಆರಂಭವಾಗಿದ್ದು, ವಾಸು ಅವರಿಗೆ ವೀರಪ್ಪಮೊಯ್ಲಿ ಮತ್ತು ಡಿ.ಕೆ.ಶಿವಕುಮಾರ್ ಅವರ ಕೃಪಾಶೀರ್ವಾದವಿದ್ದರೆ, ಹರೀಶ್ ಗೌಡರಿಗೆ ಸಿದ್ದರಾಮಯ್ಯರವರ ಶ್ರೀರಕ್ಷೆಯಿದೆ. ಹೀಗಾಗಿ ಇವರಿಬ್ಬರು ನಾಯಕರ ನಡುವಿನ ಶೀತಲ ಸಮರದಿಂದಾಗಿ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ.
ಹಾಗೆನೋಡಿದರೆ ಮಾಜಿ ಶಾಸಕ ವಾಸು ಅವರು ಒಕ್ಕಲಿಗ ಸಮುದಾಯದ ನಾಯಕನಾಗಿದ್ದು, ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರ ಜತೆಗಿನ ಸಂಬಂಧವೂ ಅಷ್ಟಕಷ್ಟೇ ಆಗಿದೆ. ಈ ಹಿಂದೆ ಸಿದ್ದರಾಮಯ್ಯರ ಬೆಂಬಲಿಗರು ಹರೀಶ್ ಗೌಡರಿಗೆ ಟಿಕೆಟ್ ಎಂದು ಘೋಷಣೆ ಮಾಡಿದ್ದರು. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೆಂಗೆಣ್ಣಿಗೆ ಕಾರಣವಾಗಿತ್ತು. ಇದಾದ ನಂತರ ಇತ್ತೀಚೆಗಿನ ಬೆಳವಣಿಗೆ ಮಾಜಿ ಶಾಸಕ ವಾಸು ಅವರನ್ನು ಅನುಮಾನದಿಂದ ನೋಡುವಂತಾಗಿದೆ.
ಈಗಾಗಲೇ ವಾಸು ಅವರ ಪುತ್ರರಿಬ್ಬರು ಕಮಲ ಹಿಡಿದಿದ್ದಾರೆ. ಆದರೆ ವಾಸು ಅವರು ಮಾತ್ರ ಮಕ್ಕಳ ನಿರ್ಧಾರಕ್ಕೂ ನನಗೂ ಸಂಬಂಧವಿಲ್ಲ ನಾನೇನಿದ್ದರೂ ಕಾಂಗ್ರೆಸ್ ನಲ್ಲೇ ಇರ್ತೀನಿ ಎಂದು ಹೇಳಿದ್ದಾರೆ. ಆದರೆ ಈ ಬೆಳವಣಿಗೆ ನಂತರ ಕ್ಷೇತ್ರದಲ್ಲಿನ ಕಾಂಗ್ರೆಸ್ ನಲ್ಲಿ ಒಂದಷ್ಟು ಗೊಂದಲ ಮುಂದುವರೆದಿದೆ. ಬಹಳಷ್ಟು ಕಾರ್ಯಕರ್ತರು ಹರೀಶ್ ಗೌಡರಿಗೆ ಟಿಕಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಹರೀಶ್ ಗೌಡರ ಬಗ್ಗೆ ಹೇಳಬೇಕೆಂದರೆ ಈ ಹಿಂದೆ ಹರೀಶ್ ಗೌಡರು ಜೆಡಿಎಸ್ ನಲ್ಲಿ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅವರಿಗೆ ಟಿಕೆಟ್ ನೀಡದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಅವರ ಸ್ಪರ್ಧೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ಮತ್ತು ಬಿಜೆಪಿ ಗೆಲುವಿಗೆ ಕಾರಣವಾಗಿತ್ತು. ಕಳೆದ ವಿಧಾನ ಸಭಾ ಚುನಾವಣೆ ಬಳಿಕ ಹರೀಶ್ ಗೌಡರು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಮೂಲ ಮತ್ತು ವಲಸಿಗ ನಾಯಕರ ನಡುವೆ ಶೀತಲ ಸಮರ ಶುರುವಾಗಿದೆ.
ಇದೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ವಾಸು ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಜತೆಗೆ ಅವರು ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ವಾಸು ಸ್ಪರ್ಧೆ ಮಾಡುವ ಸುಳಿವು ನೀಡಿದ್ದು, ಮೊದಲ ಪಟ್ಟಿಯಲ್ಲಿ ಮಾಜಿ ಶಾಸಕ ವಾಸು ಅವರ ಹೆಸರಿರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ಚುನಾವಣೆ ಸಮಿತಿಯಲ್ಲಿ ರಾಜ್ಯದಿಂದ ನಾನೊಬ್ಬನೇ ಸದಸ್ಯನಾಗಿದ್ದು, ಸಕ್ರಿಯವಾಗಿ ಕಾಂಗ್ರೆಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇನೆ. ಬಣ ರಾಜಕೀಯ ಕಾಂಗ್ರೆಸ್ನಲ್ಲಿ ಇಲ್ಲ. ಯಾರಿಗೆ ಅರ್ಹತೆ ಇದೆಯೋ ಅವರೆಲ್ಲರಿಗೂ ಟಿಕೆಟ್ ಸಿಗುವುದು ನಿಶ್ಚಿತ ಎಂದಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಮೊಯ್ಲಿ ಅವರ ಕೃಪೆ ವಾಸು ಅವರ ಮೇಲೆ ಇರುವುದಂತು ನಿಜವಾಗಿದೆ. ಇನ್ನು ವೀರಪ್ಪ ಮೊಯ್ಲಿ ಅವರು ವಾಸು ಅವರ ಮನೆಗೆ ಭೇಟಿ ನೀಡಿದ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿದ್ದು ವಾಸು ಅವರ ಪುತ್ರರಿಬ್ಬರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಹಾಗಾಗಿ, ವಾಸು ಅವರು ಮುಂದಿನ ದಿನಗಳಲ್ಲಿ ಟಿಕೆಟ್ ಸಿಗದಿದ್ದಲ್ಲಿ ಪಕ್ಷ ತೊರೆಯಬಹುದೆಂಬ ಕಾರಣಕ್ಕಾಗಿ ಎಂ.ವೀರಪ್ಪ ಮೊಯ್ಲಿ ಭೇಟಿ ನೀಡಿ ಮಾತುಕತೆ ನಡೆಸಿದ್ದು, ವಾಸು ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿರಬಹುದು ಎಂದು ಹೇಳಲಾಗಿದೆ.