ಮೈಸೂರು: ರಂಗಾಯಣದಿಂದ ಪ್ರಸ್ತುತಪಡಿಸಿರುವ ಟಿಪ್ಪು ನಿಜ ಕನಸುಗಳು ನಾಟಕ ಜನ ಮೆಚ್ಚುಗೆ ಪಡೆದುಕೊಂಡಿದೆ. ರಾಜ್ಯದ ವಿವಿಧೆಡೆ 46 ಪ್ರದರ್ಶನಗಳನ್ನು ಕಂಡಿದ್ದು, 50ನೇ ಪ್ರದರ್ಶನದತ್ತ ಸಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.
ಟಿಪ್ಪು ನಿಜ ಕನಸುಗಳು ನಾಟಕ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ. ಮಾ.12, 15, 18 ಹಾಗೂ 19ರಂದು ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನ ಆಯೋಜಿಸಲಾಗಿದ್ದು, 19ರಂದು 50ನೇ ಪ್ರದರ್ಶನ ಕಾಣಲಿದೆ. ಅಂದು, ನಾಟಕದ ಯಶಸ್ಸಿಗೆ ಕಾರಣರಾದ ಕಲಾವಿದರು ತಂತ್ರಜ್ಞರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಆರಂಭದ ದಿನಗಳಲ್ಲಿ ನಾಟಕವನ್ನು ಕೆಲವರು ಓದದೆಯೇ ವಿರೋಧಿಸಿ ವಿವಾದ ಸೃಷ್ಟಿಸಲು ಯತ್ನಿಸಿದರು. ಕೆಲವರು ನಾಟಕ ಕೃತಿಯನ್ನು ನಿಷೇಧಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ನಾಟಕದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದ ದೂರುದಾರರು, ಕೃತಿಕಾರರು ನ್ಯಾಯಾಲಯಕ್ಕೆ ಸಲ್ಲಿಸಿದ ಸಾಕ್ಷಿಗಳನ್ನು ಗಮನಿಸಿ ದೂರು ವಾಪಸ್ ಪಡೆದರು. ನ್ಯಾಯಾಲಯ ಪ್ರಕಾಶಕರು ಹಾಗೂ ಕೃತಿಕಾರರಿಗೆ ತಲಾ 3ಸಾವಿರ ಪಾವತಿಸುವಂತೆ ಆದೇಶಿಸಿ ದೂರುದಾರರಿಗೆ ದಂಡ ವಿಧಿಸಿದೆ. ಇದರಿಂದಾಗಿ ಟಿಪ್ಪು ನಿಜಕನಸುಗಳು ನಾಟಕ ಕೃತಿ ನ್ಯಾಯಾಲಯದಲ್ಲಿ ಗೆಲುವು ಸಾಧಿಸಿದೆ ಎಂದರು.
ನಾಟಕವನ್ನು ರಂಗಾಯಣದ ರೆಪರ್ಟರಿ ತಂಡ ಮೂರು ಹಂತದಲ್ಲಿ ರಾಜ್ಯಾದ್ಯಂತ ಪ್ರದರ್ಶನ ಮಾಡಿದೆ. ಮೊದಲ ಹಂತದಲ್ಲಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮಂಗಳೂರು, ಪುತ್ತೂರು, ಪೊನ್ನಂಪೇಟೆ, ಮಂಡ್ಯದಲ್ಲಿ 14 ಪ್ರದರ್ಶನ ಕಂಡಿತು. 2ನೇ ಹಂತದಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕಲಬುರಗಿ, ಬೀದರ್, ಬಳ್ಳಾರಿಯಲ್ಲಿ 10, ಮೂರನೇ ಹಂತದಲ್ಲಿ ಕುಶಾಲನಗರ, ತೀರ್ಥಹಳ್ಳಿ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಕೋಲಾರ, ಚಾಮರಾಜನಗರದಲ್ಲಿ 9 ಪ್ರದರ್ಶನ ಕಂಡಿದೆ. ಮೈಸೂರಿನಲ್ಲಿ ಶನಿವಾರದವರೆಗೆ 13 ಪ್ರದರ್ಶನಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದ ಜಿಲ್ಲಾ ರಂಗಮಂದಿರಗಳಲ್ಲಿ ಪ್ರದರ್ಶನವನ್ನು ನೀಡಲಾಗಿದೆ. ಖರ್ಚು ವೆಚ್ಚ ಹಾಗೂ ಆದಾಯವನ್ನು ಪರಿಶೀಲಿಸಲಾಗುತ್ತಿದ್ದು, ಮುಂದೆ ವಿವರ ನೀಡಲಾಗುವುದು. 38 ಜನ ನಟರು ತಂತ್ರಜ್ಞರು ಸೇರಿರುವ ರಂಗಾಯಣ ರೆಪರ್ಟರಿ ತಂಡ ಯಶಸ್ವಿ ರಂಗ ಪ್ರವಾಸ ಮುಗಿಸಿದೆ. ಭಾರತೀಯ ರಂಗಭೂಮಿಯಲ್ಲಿ ಈ ದಶಕದ ಯಶಸ್ವಿ ರಂಗಯಾನ ಇದಾಗಿದೆ ಎಂದು ತಿಳಿಸಿದರು.
ರಂಗಾಯಣದಿಂದ ಈ ಬಾರಿ ನಮ್ಮೀ ತಾಯ್ನೆಲ ಶೀರ್ಷಿಕೆಯಡಿ ಏ.10ರಿಂದ ಮೇ 5ರವರೆಗೆ ಕಿಶೋರೋಲ್ಲಾಸ ಹೆಸರಿನಲ್ಲಿ ಚಿಣ್ಣರ ಮೇಳ ಆಯೋಜಿಸಲಾಗಿದೆ. ಕೊರೊನಾದಿಂದಾಗಿ ಕಳೆದ ಮೂರು ವರ್ಷಗಳಿಂದ ಚಿಣ್ಣರ ಮೇಳ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮೂರು ವರ್ಷಗಳ ನಂತರ ಮೇಳ ನಡೆಸಲಾಗುತ್ತಿದೆ. 7ರಿಂದ 14ದೊಳಗಿನ ಮಕ್ಕಳಿಗೆ ಮಾತ್ರ ಪ್ರವೇಶವಿರಲಿದೆ. ಏ.1ರಂದು ಬೆಳಗ್ಗೆ 10ಗಂಟೆಗೆ ರಂಗಾಯಣದ ಕಚೇರಿಯಲ್ಲಿ ಅರ್ಜಿ ವಿತರಿಸಲಾಗುವುದು. 100 ರೂ ಅರ್ಜಿ ಶುಲ್ಕ ನಿಗದಿ ಮಾಡಿದ್ದು, 3 ಸಾವಿರ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಈ ಬಾರಿ 250 ಅರ್ಜಿಗಳನ್ನು ಮಾತ್ರ ನೀಡಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಇರಲಿದ್ದು, ಯಾವುದೇ ಶಿಫಾರಸ್ಸಿಗೆ ಅವಕಾಶ ಇಲ್ಲ. ಭರ್ತಿ ಮಾಡಿದ ಅರ್ಜಿಗಳನ್ನು ಮಾ.5ರಂದು ಸಂಜೆ 5ರೊಳಗೆ ಸಲ್ಲಿಸಬೇಕು ಎಂದು ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.