ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯು ಕಾಡುಹಂದಿಯನ್ನು ಅಟ್ಟಿಸಿಕೊಂಡು ಹೋಗಿ ಬೇಟೆಯಾಡಿದ ಘಟನೆಯನ್ನು ಪ್ರವಾಸಿಗರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿರುವ ಆಘಾತಕಾರಿ ಘಟನೆ ನಡೆದಿದೆ.
ಸಫಾರಿ ವೇಳೆ ಅತಿ ಹೆಚ್ಚು ಹುಲಿಗಳು ಕಾಣಸಿಗುವ ದಮ್ಮನಕಟ್ಟೆ ಅರಣ್ಯ ವ್ಯಾಪ್ತಿಯ ಕಾಕನಕೋಟೆ ಬಳಿ ಪ್ರವಾಸಿಗರ ಸಮ್ಮುಖದಲ್ಲಿ ಹುಲಿ ಕಾಡುಹಂದಿಯನ್ನು ಬೇಟೆಯಾಡುತ್ತಿರುವ ಅಪರೂಪದ ದೃಶ್ಯ ಸೆರೆಯಾಗಿದೆ.
ದಮ್ಮನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಪ್ರವಾಸಿಗರ ವಾಹನದ ಎದುರು ಹುಲಿ ಕಾಡುಹಂದಿಯನ್ನು ಹಿಂಬಾಲಿಸಿದೆ. ಕಾಡುಹಂದಿ ಎಷ್ಟೇ ದೂರ ಓಡಿದರೂ ಹುಲಿ ಮನಬಂದಂತೆ ಬೇಟೆಯಾಡಿದ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯಿತು.
ನಾಗರಹೊಳೆಯ ವೀರನ ಹೊಸಹಳ್ಳಿ, ನಾನಾಚಿ ಗೇಟ್ ಮತ್ತು ದಮ್ಮನಕಟ್ಟೆಯಿಂದ ಸಫಾರಿ ಮಾಡಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ವೀರನ ಹೊಸಹಳ್ಳಿ ಮತ್ತು ನಾನಚಿ ಗೇಟ್ ಸಫಾರಿ ಪ್ರದೇಶಕ್ಕಿಂತ ಹೆಚ್ಚು ಪ್ರವಾಸಿಗರು ದಮ್ಮನಕಟ್ಟೆಯಲ್ಲಿ ಪ್ರತಿನಿತ್ಯ ಹುಲಿಗಳನ್ನು ನೋಡುತ್ತಾರೆ. ಹಾಗಾಗಿ ಇಲ್ಲಿ ಸಫಾರಿಗಳಿಗೆ ಭಾರಿ ಬೇಡಿಕೆ ಇದೆ.
ಆಹಾರ ಅರಸಿ ಕಾಡಿನಲ್ಲಿ ಅಲೆದಾಡುತ್ತಿದ್ದ ಕಾಡುಹಂದಿ ಎದುರಿಗೆ ಬಂದ ಹುಲಿಯನ್ನು ಕಂಡು ಪ್ರಾಣ ಉಳಿಸಿಕೊಳ್ಳಲು ಓಡಿ ಬಂದರೂ ಪ್ರಯೋಜನವಾಗಲಿಲ್ಲ. ಕಾಡುಹಂದಿ ಸುಮಾರು ಎರಡು ನಿಮಿಷಗಳ ಕಾಲ ಕಾದಾಡಿದರೂ, ಹುಲಿಯು ಕಾಡುಹಂದಿಯನ್ನು ಬೇಟೆಯಾಡಿ ತನ್ನ ಹಸಿವನ್ನು ತಣಿಸಿಕೊಂಡಿತು.