ಮೈಸೂರು: ಕೋವಿಡ್-19 ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದು, ಅವರ ಆರೋಗ್ಯ, ರಕ್ಷಣೆ ಮತ್ತು ಅವರಿಗಿರುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಡಬೇಕಿದೆ ಎಂದು ತೆಲಂಗಾಣ, ಆಂಧಪ್ರದೇಶ ಮತ್ತು ಕರ್ನಾಟಕದ ಯೂನಿಸೆಫ್ ಕಚೇರಿಯ ಅಧಿಕಾರಿ ಹಾಗೂ ಸಂವಹನ, ವಕಾಲತ್ತು ಮತ್ತು ಪಾಲುದಾರಿಕೆ ತಜ್ಞ ಪ್ರೊಸನ್ ಸೇನ್ ಹೇಳಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ ಹೈದರಾಬಾದ್ ಯುನಿಸೆಫ್ ಸಹಯೋಗದೊಂದಿಗೆ ಕೋವಿಡ್ ಅವಧಿಯ ನಂತರ ಮಕ್ಕಳ ಸಮಸ್ಯೆ ಕುರಿತು ಪತ್ರಕರ್ತರ ಸಂವೇದನೆ ಎಂಬ ವಿಷಯದ ಕುರಿತು ನಡೆದ ಎರಡು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಕೋವಿಡ್ ಸಮಯದಲ್ಲಿ ಸಾಕಷ್ಟು ಮಕ್ಕಳು ಮೃತಪಟ್ಟವು. ಅಲ್ಲದೆ, ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿತು. ಸರ್ಕಾರಿ ಶಾಲೆಗಳಲ್ಲಿ ಊಟ, ಮೊಟ್ಟೆ ಸಿಗುತ್ತಿತ್ತು. ಆದರೆ, ಶಾಲೆಗಳು ಮುಚ್ಚಿದ ಪರಿಣಾಮ ಮಕ್ಕಳಿಗೆ ಪೌಷ್ಟಿಕಾಹಾರ ಸಿಗಲಿಲ್ಲ. ಕೆಲವು ಮಕ್ಕಳು ಮೊಬೈಲ್ ಗೀಳಿಗೆ ಬಿದ್ದವು. ಮಕ್ಕಳ ಮೇಲೆ ದೌರ್ಜನ್ಯ ನಡೆಯಿತು. ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ಹೆಚ್ಚಾಯಿತು. ಜತೆಗೆ ಬಾಲ ಕಾರ್ಮಿಕರ ಸಂಖ್ಯೆಯೂ ದ್ವಿಗುಣಗೊಂಡಿತು. ಮಕ್ಕಳ ಸಮಸ್ಯೆ ಬಗೆಹರಿಸಲು ಅವರ ಆರೋಗ್ಯ, ರಕ್ಷಣೆ, ಅವರಿಗಿರುವ ಸೌಲಭ್ಯಗಳ ಬಗ್ಗೆ ಹೆಚ್ಚು ಚರ್ಚೆ ಆಗಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಸಮಾಜ ಉನ್ನತಿಗೆ ಹೋಗಬೇಕಾದರೆ ವೌಲ್ಯಗಳು ತುಂಬಾ ಅವಶ್ಯಕ. ಆದರೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ಥಿತ್ಯಂತರದಲ್ಲಿ ನಾವಿದ್ದೇವೆ. ಪತ್ರಿಕೋದ್ಯಮ ಸಮಾಜದ ಕಣ್ಣು. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಪತ್ರಿಕಾ ಮಾಧಮವೂ ಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಪ್ರಾಧ್ಯಾಪಕಿ ಪ್ರೊ.ಎಂ.ಎಸ್.ಸಪ್ನ, ಸಹ ಪ್ರಾಧ್ಯಾಪಕಿ ಡಾ.ಎನ್.ಮಮತಾ ಇದ್ದರು.