ಮೈಸೂರು: ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಸುಮಾರು ಎರಡು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ಪಂಡಿತ್ ಜವಾಹರಲಾಲ್ ನೆಹರೂ ಅವರು ದೇಶದ ಸುಂದರ ಭವಿಷ್ಯ ಯಾವತ್ತೂ ಮಕ್ಕಳ ಕೈನಲ್ಲಿದೆಯೆಂದು ನಂಬಿದ್ದರೆಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.
ನಗರದ ಪ್ರತಿಷ್ಠಿತ ಶಿಕ್ಷಣ ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವಾ ಸಂಸ್ಥೆಗಳಲ್ಲೊಂದಾದ ಹಿರಣ್ಮಯಿ ಪ್ರತಿಷ್ಠಾನವು ಅಗ್ರಹಾರದ ಶ್ರೀ ಲಲಿತಕಲಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಕಂಡ ಪ್ರಗತಿಪರ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗಿದ್ದ ಮಕ್ಕಳ ಮೇಲಿನ ಪ್ರೀತಿ ಮತ್ತು ಕಾಳಜಿಯ ದ್ಯೋತಕವಾಗಿ ನವೆಂಬರ್ 14ರ ನೆಹರೂ ಜನ್ಮದಿನವನ್ನು ಅವರ ಆಶಯದಂತೆ ಭಾರತ ಸರ್ಕಾರದ ಘೋಷಣೆಯಂತೆ ರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನಾಗಿ ನೆಹರು ಅವರ ಗೌರವಾರ್ಥ ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಮಕ್ಕಳು ಅರಳುವ ಹೂಗಳಿದ್ದಂತೆ.ಈ ಹೂವುಗಳು ಯಾವತ್ತೂ ಬಾಡಬಾರದು. ದಿನದಿಂದ ದಿನಕ್ಕೆ ಅರಳುತ್ತ ತಮ್ಮ ಪ್ರತಿಭೆಯಿಂದ ಘಮಘಮಿಸಿ, ಅದೇ ರೀತಿ ಸುಂದರ ಹೂವಿನಂತೆ ತಮ್ಮ ಭವಿಷ್ಯವನ್ನು ಅರಳಿಸಿಕೊಂಡು ಚಂದದ ಬದುಕನ್ನು ಕಟ್ಟಿಕೊಳ್ಳಬೇಕು. ನೆಹರು ಅವರು ಹೇಳಿರುವಂತೆ ಮಕ್ಕಳ ಭವಿಷ್ಯದಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ಇಂದಿನ ಮಕ್ಕಳೇ ನಾಳಿನ ಸತ್ಪ್ರಜೆಗಳು ಮತ್ತು ಮುಂದಿನ ನಾಯಕರು ಹಾಗೂ ಸಾಧಕರು. ಹಾಗಾಗಿ ಮಕ್ಕಳು ಶಿಕ್ಷಣದ ಮಹತ್ವ ಅರಿತು ಕೊಂಡು ಚೆನ್ನಾಗಿ ಓದಿ ಸಾಧಕರಾಗಬೇಕು.ಮಕ್ಕಳ ದಿನಾಚರಣೆಯ ಉದ್ದೇಶವೂ ಇದೇ ಆಗಿದ್ದು ಮಕ್ಕಳ ಹಕ್ಕುಗಳ ಅರಿವು, ಮಕ್ಕಳ ಸಂರಕ್ಷಣೆ, ಮಕ್ಕಳ ಆರೋಗ್ಯ, ಆರೈಕೆ, ಕಡ್ಡಾಯ ಶಿಕ್ಷಣ, ಇದೆಲ್ಲವೂ ಇಲ್ಲಿ ಒಳಗೊಂಡಿದ್ದು ಇದರ ಜಾಗೃತಿ ಸಮರ್ಪಕವಾಗಿ ಆಗಬೇಕಿದೆ.ತಂದೆ, ತಾಯಿ, ಪೋಷಕರು, ಶಿಕ್ಷಕರು, ಸಂಘ ಸಂಸ್ಥೆಗಳು ಸೇರಿದಂತೆ ಒಟ್ಟಾರೆ ಇಡೀ ಸಮಾಜ ಮಕ್ಕಳ ಒಳ್ಳೆಯ ಭವಿಷ್ಯಕ್ಕೆ ಪೂರಕವಾಗಿ ಕೆಲಸ ಮಾಡಬೇಕಾಗಿದೆ. ಆಗ ಮಾತ್ರ ನೆಹರೂ ಕಂಡ ಮಕ್ಕಳ ಭವಿಷ್ಯ ಮತ್ತು ದೇಶದ ಅಭಿವೃದ್ಧಿ ಸಾರ್ಥಕ್ಯಗೊಳ್ಳುತ್ತದೆ ಹಾಗೂ ಮಕ್ಕಳು ದೇಶದ ಸಂಪತ್ತೆಂಬುದು ಅಕ್ಷರಶಃ ನಿಜವಾಗುತ್ತದೆಂದ ಅವರು, ಈ ದಿಸೆಯಲ್ಲಿ ಮಕ್ಕಳು ಕೂಡ ನೆಹರು ಅವರ ಆದರ್ಶಗಳನ್ನು ಮಾದರಿಯಾಗಿಟ್ಟುಕೊಂಡು ಅವರ ಆಶಯದಂತೆ ನಡೆಯಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಖ್ಯಾತ ಶಿಕ್ಷಣ ತಜ್ಞರೂ ಆದ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕ ಬಿ.ಎಂ.ಪರಮೇಶ್ ಅಧ್ಯಕ್ಷತೆ ವಹಿಸಿದ್ದರು.ಖ್ಯಾತ ಓರೀಗಾಮಿ ಕಲಾ ತಜ್ಞರೂ ಆದ ಮೈಸೂರು ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಎಚ್.ವಿ.ಮುರುಳಿಧರ್ ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷಕಿಯರಾದ ಸೌಮ್ಯಶ್ರೀ, ಮಹೇಶ್ವರಿ, ಕಲ್ಪನಾ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.