ಮೈಸೂರು: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನ್ನು ಅಬಕಾರಿ ಅಧಿಕಾರಿಗಳು ತಪಾಸಣೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ಬಿಯರ್ ವಶಪಡಿಸಿಕೊಂಡಿರುವ ಘಟನೆ ನಗರದ ಮೇಸ್ಕೋ ಸ್ಕೂಲ್ ರಸ್ತೆಯಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿರುವುದರ ಮೇಲೆ ನಿಗಾ ಇರಿಸಿದ್ದು, ತಮಗೆ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಬಕಾರಿ ಜಂಟಿ ಆಯುಕ್ತ ಎಫ್.ಎಸ್.ಛಲವಾದಿ, ಹಾಗೂ ಅಬಕಾರಿ ಉಪ ಆಯುಕ್ತ ಎಸ್.ನಾಗರಾಜಪ್ಪ ಮಾರ್ಗದರ್ಶನದಲ್ಲಿ ತನಿಖಾದಳದ ಅಬಕಾರಿ ನಿರೀಕ್ಷಕ ಎ.ಎ.ಮುಜಾವರ ಹಾಗೂ ಸಿಬ್ಬಂದಿಗಳು ತಂಡ ರಚಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದರು.
ಈ ವೇಳೆ ಮೈಸೂರು ನಗರದ ಮೇಸ್ಕೋ ಸ್ಕೂಲ್ ರಸ್ತೆಯಲ್ಲಿ ದಾಳಿ ಮಾಡಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಿವಿಧ ಬ್ರಾಂಡಿನ 88.560 ಲೀಟರ್ ಮದ್ಯ ಹಾಗೂ 46.920 ಲೀಟರ್ ಬಿಯರ್ ಸೇರಿದಂತೆ ಒಟ್ಟು 8 ಲಕ್ಷ ರೂ ಮೌಲ್ಯದ ಮದ್ಯ ವಶಪಡಿಸಿಕೊಂಡು ಮದ್ಯ ಸಾಗಾಟ ಮಾಡುತ್ತಿದ್ದ ನಾಗರಾಜು ಹಾಗೂ ಆತನಿಗೆ ಮದ್ಯ ಪೂರೈಸಿದ ಶಂಕರಯ್ಯ ಮತ್ತು ವಾಹನ ಮಾಲೀಕರ ವಿರುದ್ದ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಚೇರಿಯ ಹಿರಿಯ ವಾಹನ ಚಾಲಕ ಮಂಜು, ಬಿ.ಎಸ್.ಗುರುಮಲ್ಲೇಶ್, ಹಿರಿಯ ಪೇದೆ ಎನ್.ಅಜಂ ಮತ್ತು ಪ್ರತಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.