ಮೈಸೂರು: ನಂಜನಗೂಡಿಗೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ನ.28ರಂದು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 13 ಕೆರೆ ತುಂಬೋ ಯೋಜನೆ, ನುಗು ಏತಾವರಿ ಯೋಜನೆ, ದೇವಸ್ಥಾನದ ವತಿಯಿಂದ 100 ವಸತಿ ಗೃಹ ಯೋಜನೆ. ಗೂಳೂರು ಬಳಿ ವಿದ್ಯುತ್ ಉಪ ಕೇಂದ್ರ. ನಗರಸಭೆಯ ವಿವಿಧ ಕಾಮಗಾರಿಗಳು ಹಾಗೂ ಶಂಕು ಸ್ಥಾಪನೆ ನೆರವೇರಿಸಲಿದ್ದು, ಈ ಸಂಬಂಧ ವೇದಿಕೆಯನ್ನು ಸಿದ್ದಗೊಳಿಸಲಾಗಿದೆ.
ಮೈಸೂರಿನ ಮಂಡಕಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ರಾಷ್ಟ್ರೀಯ ಹೆದ್ದಾರಿ ಮುಖಾಂತರ ನಂಜನಗೂಡು ಬೈಪಾಸ್ ರಸ್ತೆ ಮುಖಾಂತರ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ ತಲುಪಲಿದ್ದು, ನಂತರ ದೇವರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಹಿಂದೆ 2003 ನಲ್ಲಿ ಅಂದಿನ ಸಚಿವರಾಗಿದ್ದ ದಿ. ಮಹಾದೇವ ರವರ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ರವರು ದೇವಸ್ಥಾನದ ಮುಂಭಾಗ ನೂರು ಕೊಠಡಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಒಂದು ರೂಪ ತಂದುಕೊಟ್ಟಿದ್ದರು.
ಸಚಿವರಾಗಿದ್ದ ದಿವಂಗತ ಡಿ ಟಿ ಜಯಕುಮಾರ್ ರವರು ದೇವಸ್ಥಾನದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಮಾಜಿ ಸಚಿವ ಎಚ್.ಸಿ.ಮಹದೇವಪ್ಪನವರು ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ದೇವಸ್ಥಾನದ ಮುಂಭಾಗದ ಪಾರ್ಕಿಗೆ ಕಲ್ಲುಆಸನ ಮತ್ತು ಸುತ್ತಲೂ ಕಾಂಪೌಂಡ್ ಹಾಗೂ ಕಪಿಲಾ ನದಿಗೆ ಭಕ್ತಾಧಿಗಳಿಗೆ ಸ್ನಾನ ಮಾಡಲು ಸ್ನಾನ ಘಟ್ಟ ನಿರ್ಮಿಸಿದರು. ದೇವಸ್ಥಾನದ ವತಿಯಿಂದ 100 ವಸತಿ ಗೃಹ ನಿರ್ಮಿಸಲು ಇದು ಮೂರನೇ ಭೂಮಿ ಪೂಜೆ ನಡೆಯುತ್ತಿದೆ.
ನುಗು ಏತ ನೀರಾವರಿ ಕಾಮಗಾರಿಯನ್ನು ಕಾಂಗ್ರೆಸ್ ಸರ್ಕಾರ ದಲ್ಲಿ ದಿ.ಮಹದೇವರವರು ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ರವರ ಮುಖಾಂತರ ಭೂಮಿ ಪೂಜೆ ನೆರವೇರಿಸಿದರು. 2018 ರ ಸಮಿಶ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ವಿಧಾನಸಭೆಯ ಕ್ಯಾಬಿನೆಟ್ ನಲ್ಲಿ ನಗು ಏತ ನೀರಾವರಿಗೆ ಅನುಮೋದನೆ ಮಾಡಿಕೊಟ್ಟರು. ಆ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಮಗಾರಿಗೆ ಹಣ ಬಿಡುಗಡೆ ಮಾಡಿದರು.
ಇದೀಗ ಮತ್ತೆ ನಂಜನಗೂಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು ಸದ್ಯ ಮುಖ್ಯರಸ್ತೆಗಳಲ್ಲಿದ್ದ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.