ಮೈಸೂರು: ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಸಕ್ತರು ಲಗ್ಗೆಯಿಟ್ಟಿದ್ದು, ನಾಟಕ ಪ್ರದರ್ಶನ ಸೇರಿದಂತೆ ಜಾನಪದ ನೃತ್ಯ, ಗಾಯನ ಕಾರ್ಯಕ್ರಮಗಳನ್ನು ನೋಡಿ ಖುಷಿಪಡುತ್ತಿದ್ದಾರೆ.
ಬಿ.ವಿ. ಕಾರಂತ್ ರಂಗ ಚಾವಡಿಯಲ್ಲಿ ಸೋಮವಾರ ಸಂಜೆ ಕಿರಗಸೂರು ರಾಜಪ್ಪ ಮತ್ತು ತಂಡದಿಂದ ನಡೆದ ರಂಗಗೀತೆಗಳ ಗಾಯನ ಕಾರ್ಯಕ್ರಮ ಕೇಳುಗರನ್ನು ಮೋಡಿ ಮಾಡಿತು.
ಬಳಿಕ ಕಿರಗಸೂರು ರಾಜಪ್ಪ ಪ್ರಸ್ತುತಪಡಿಸಿದ ದಶವತಾರ ನಾಟಕದ ಜಾನಕಿ ಪ್ರಾಣಸಖಿ..ಸೀತಾ..ಹಾ..ಜಾನಕಿ…ಅಗಲಿದೆಯಾ ಕಮಲ ಮುಖಿ..ಹಾಡಿಗೆ ರಂಗಾಸಕ್ತರು ಮಂತ್ರ ಮುಗ್ದರಾದರು. ಚಿಕ್ಕಮಗಳೂರು ರಂಗನಾಥ ಮತ್ತು ತಂಡದಿಂದ ನಡೆದ ಸೋಮನ ಕುಣಿತ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿತು. ಕಲಾವಿದರಿಬ್ಬರು ಸೋಮನ ಮುಖವಾಡ ಧರಿಸಿ 20 ನಿಮಿಷಗಳ ಕಾಲ ಡೋಲು, ತಮಟೆ ಹಾಗೂ ವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ತಮ್ಮ ನೆಲದ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.
ಉಡುಪಿಯ ಶ್ರೀರಾಂ ಜನಪದ ಕಲಾತಂಡ ಪುನೀತ್ ಅವರ ನೇತೃತ್ವದಲ್ಲಿ ನಡೆಸಿಕೊಟ್ಟ ಕರಗ ಕೋಲಾಟ ಅದ್ಭುತವಾಗಿ ಮೂಡಿಬಂದಿತು. ತಮಟೆ ಮತ್ತು ನಾದಸ್ವರದ ನಾದಕ್ಕೆ ತಲೆ ಮೇಲೆ ಅಲಂಕೃತಗೊಂಡ ಕರಗ ಹೊತ್ತು ಕೈಯಲ್ಲಿ ಬಣ್ಣ ಬಳಿದ ಕೋಲುಗಳನ್ನು ಹಿಡಿದು ಕಲಾವಿದರು ಪ್ರದರ್ಶಿಸಿದ ನೃತ್ಯ ಬಹರೂಪಿಗೆ ಮೆರಗು ತಂದಿತು.